ಕನ್ನಡಪ್ರಭವಾರ್ತೆ ಗುಳೇದಗುಡ್ಡ ರಸ್ತೆ ಬದಿ ನಗ್ನಾವಸ್ಥೆಯ ಬಿದ್ದಿದ್ದ ಬುದ್ಧಿಮಾಂದ್ಯ ವ್ಯಕ್ತಿಯನ್ನು ರಕ್ಷಿಸಿ, ಆತನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಊಟ ನೀಡಿದ ಪಟ್ಟಣದ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಪಟ್ಟಣ ಸಮೀಪದ ಅಲ್ಲೂರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಎರಡು ದಿನಗಳಿಂದ ನಗ್ನನಾಗಿ ಬಿದ್ದಿದ್ದ ಬುದ್ಧಿಮಾಂದ್ಯ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯರು ಬಾಗಲಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರ ಸೂಚನೆಯಂತೆ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಚಂದ್ರಶೇಖರ ಕಿರಿಶಾಳ ಸಿಬ್ಬಂದಿ ಸಹಿತ ಸ್ಥಳಕ್ಕೆ ಬಂದು ರಸ್ತೆಬದಿಯಲ್ಲಿ ಬಿದ್ದಿದ್ದ ಬುದ್ಧಿಮಾಂದ್ಯ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನಂತರ ಪೊಲಿಸರೇ ಅವನಿಗೆ ಸ್ನಾನ ಮಾಡಿಸಿ, ಸ್ವಂತ ಖರ್ಚಿನಲ್ಲಿ ಬಟ್ಟೆ ತೊಡಿಸಿ, ಊಟ ಮಾಡಿಸಿದ್ದಾರೆ. ಬಳಿಕ ಬಾಗಲಕೋಟೆಯ ಸಾಂತ್ವನ ಕೇಂದ್ರಕ್ಕೆ ಸೇರಿಸಿ, ಮಾನವೀಯತೆ ಮೆರೆದಿದ್ದಾರೆ. ಬುದ್ಧಿಮಾಂದ್ಯ ವ್ಯಕ್ತಿಯ ಕುರಿತು ಪ್ರಾಥಮಿಕ ಮಾಹಿತಿ ಕಲೆಹಾಕಿರುವ ಪೊಲೀಸರು ಆತ ಮಹಾರಾಷ್ಟ್ರದ ಮೂಲದವನೆಂದು ಪತ್ತೆಹೆಚ್ಚಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಚಂದ್ರಶೇಖರ ಕಿರಸೂರ, ಆನಂದ ಮನ್ನಿಕಟ್ಟಿ, ಅಶೋಕ ಜಿಂಗಿ ಹಾಗೂ ಕೋಟೆಕಲ್ಲ ಗ್ರಾಮದ ಶಿವಾನಂದ ಮರಿಶೆಟ್ಟಿ ಸಹಾಯ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದೆ. ಪೊಲೀಸರ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.