ಬಾಡಿಗೆ ಕಟ್ಟಡದಲ್ಲಿ ಹಾಲು ಸೊಸೈಟಿಗಳು

KannadaprabhaNewsNetwork |  
Published : Sep 02, 2025, 12:00 AM IST
ಹಾಲು ಸಂಗ್ರಹಿಸುತ್ತಿರುವುದು. | Kannada Prabha

ಸಾರಾಂಶ

ಬಹುತೇಕ ಹಾಲು ಉತ್ಪಾದಕ ಸಹಕಾರ ಸಂಘಗಳು ಲಾಭ-ನಷ್ಟದ ಗಡಿಯಲ್ಲಿ ವ್ಯವಹರಿಸುತ್ತಿದ್ದು,

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಜಿಲ್ಲೆಯ ಬಹುತೇಕ ಹಾಲು ಉತ್ಪಾದಕ ಸಹಕಾರ ಸಂಘಗಳು ಲಾಭ-ನಷ್ಟದ ಗಡಿಯಲ್ಲಿ ವ್ಯವಹರಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರದತ್ತ ಮುಖ ಮಾಡಿವೆ. ಆದರೆ ಈ ಸಂಘಗಳು ಲಾಭ ಮಾಡುವ ಸಂಸ್ಥೆಗಳ ಸಾಲಿನಲ್ಲಿರುವ ಕಾರಣ ಅವುಗಳಿಗೆ ಶಾಸಕ, ಸಂಸದರ ನಿಧಿ ನೀಡಲು ಅವಕಾಶವಿಲ್ಲ ಎಂಬ ನಿಯಮ ಸಂಘ ನಡೆಸುವವರ ನಿರಾಸೆಗೆ ಕಾರಣವಾಗಿದೆ.ಹಾಲು ಉತ್ಪಾದಕ ಸಂಘಗಳು ಮೂರೂವರೆ ದಶಕಗಳ ಹಿಂದೆ ಕಾರ್ಯಾರಂಭ ಮಾಡಿವೆ. 317 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, ಈ ಪೈಕಿ 97 ಸಂಘಗಳಿಗೆ ಮಾತ್ರವೇ ಸ್ವಂತ ಕಟ್ಟಡಗಳಿವೆ. ಉಳಿದಂತೆ 220 ಸಂಘಗಳು ಇಂದಿಗೂ ಸಂಘದ ಕಾರ್ಯದರ್ಶಿಯ ಮನೆ, ದೇವಸ್ಥಾನಗಳ ಪಕ್ಕದ ಜಾಗ, ಸಭಾಭವನಗಳಲ್ಲಿ ನಡೆಯುತ್ತಿವೆ. ಹೆಚ್ಚಿನ ಸಂಘಗಳು ದಿನಕ್ಕೆ ಸರಾಸರಿ 200ರಿಂದ 250 ಲೀ. ಹಾಲು ಉತ್ಪಾದನೆ ಮಾಡುತ್ತವೆ. ಬಂದ ಆದಾಯದಲ್ಲಿ ಸಂಘಕ್ಕೆ ಬೇಕಾದ ಕಟ್ಟಡ ನಿರ್ಮಾಣ ಕಷ್ಟಕರ. ಹೀಗಾಗಿ, ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿವೆ.

ಹಾಲಿನ ಫ್ಯಾಟ್ ಅಳೆಯುವ ಮಾಪಕ, ಡಿಜಿಟಲ್ ತೂಕದಯಂತ್ರ, ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಇಂತಹ ಸಂಘಗಳಲ್ಲಿ ಜಾಗದ ಸಮಸ್ಯೆಯಿದೆ. ಕೆಲವೆಡೆ ಕಾಗದ ಪತ್ರಗಳ ರಕ್ಷಣೆಯೂ ಸವಾಲಾಗಿದೆ. ಕ್ಯಾನ್, ಟೇಬಲ್, ಕುರ್ಚಿ ಸೇರಿದಂತೆ ಸಾಕಷ್ಟು ಸಾಮಗ್ರಿಗಳು ಹಾಗೂ ರೈತರಿಗೆ ವಿತರಿಸುವ ಪಶು ಆಹಾರಗಳನ್ನು ಕಚೇರಿಯಲ್ಲಿ ಸಂಗ್ರಹಿಸಬೇಕು. ಸ್ವಂತ ಕಟ್ಟಡವಲ್ಲದ ಕಾರಣ ವಿದ್ಯುತ್ ಸಂಪರ್ಕ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಈ ಹಿಂದೆಯೇ ಮನವಿ ಮಾಡಿದ್ದು, ಅದಕ್ಕೆ ಉತ್ತರವಾಗಿ ಲಾಭ ಮಾಡುವ ಸಂಘಗಳಿಗೆ ಶಾಸಕ, ಸಂಸದರ ನಿಧಿ ಬಳಕೆಗೆ ಅವಕಾಶವಿಲ್ಲ ಎಂದು ಹಿಂಬರಹ ಕಳುಹಿಸಲಾಗಿದೆ ಎನ್ನುತ್ತಾರೆ ಸಂಘಗಳ ಪ್ರಮುಖರು.

ಸಂಘದಲ್ಲಿ ದುಡಿಯುವ ಸಿಬ್ಬಂದಿಗೆ ಯೋಗ್ಯ ಸಂಬಳ ನೀಡಿದರೆ ಜಿಲ್ಲೆಯ ಯಾವುದೇ ಸಂಘವೂ ಲಾಭ ಗಳಿಸುವುದು ಸಾಧ್ಯವಿಲ್ಲ. ಅವರಿಗೆ ಕಡಿಮೆ ಸಂಬಳ ನೀಡುವ ಕಾರಣ ಸಂಘದಲ್ಲಿ ಲಾಭ ಕಾಣುವಂತಾಗಿದೆ. ಸತತ ಮೂರು ವರ್ಷ ಲಾಭಾಂಶ ತೋರಿಸದಿದ್ದರೆ ಕಾನೂನಾತ್ಮಕವಾಗಿ ಆ ಸಂಘ ನಡೆಸುವುದು ಕಷ್ಟ. ಹಾಗಾಗಿ ಅನಿವಾರ್ಯವಾಗಿ ಲಾಭಾಂಶ ತೋರಿಸಬೇಕಿದೆ. ಆದರೆ ಇದೇ ಲಾಭಾಂಶ ಶಾಸಕ, ಸಂಸದರ ಅನುದಾನ ಪಡೆಯುವಲ್ಲಿ ತೊಡಕಾಗಿ ಮಾರ್ಪಟ್ಟಿದೆ ಎಂಬುದು ಸಂಘದ ಅಧ್ಯಕ್ಷರೊಬ್ಬರ ಮಾತು.

ಈ ಹಿಂದೆ ಹಾಲು ಮಹಾಮಂಡಳದಿಂದ ಜಿಲ್ಲೆಯ ಪ್ರತಿ ನಿರ್ದೇಶಕರಿಗೆ ತಲಾ ಒಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಸಿಗುತ್ತಿತ್ತು. ಎರಡು ವರ್ಷಗಳಿಂದ ಅದೂ ಸ್ಥಗಿತವಾಗಿದೆ. ಇಡೀ ಜಿಲ್ಲೆಗೆ ಕೇವಲ 1 ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಸಕ, ಸಂಸದರ ನಿಧಿಯಿಂದ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿ ಈ ವಿಷಯವನ್ನು ಅವಲೋಕಿಸಿ, ಆದ್ಯತೆ ಮೇಲೆ ಇಲ್ಲಿಯೂ ಅನುದಾನ ಕೊಡಿಸಲು ಮುಂದಾಗಬೇಕು ಎಂಬುದು ಹೈನುಗಾರರ ಒತ್ತಾಯವಾಗಿದೆ.

ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕ ಸಂಘಗಳು ಬಹುತೇಕ ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಿವೆ. ಕನಿಷ್ಠ ₹500ನಿಂದ ₹2,500ವರೆಗೆ ಬಾಡಿಗೆ ಪಾವತಿಸುತ್ತಿವೆ.

ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸಂಘಗಳು ವಾರ್ಷಿಕ ₹40 ಲಕ್ಷ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸುತ್ತಿವೆ. ಆದರೂ ಕೆಲವೆಡೆ ಬಾಡಿಗೆ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತವೆ. ಹಾಲು ಹಾಕಲು ಬಂದವರಿಗೆ ನಿಲ್ಲಲಾಗದಂತಹ ಇಕ್ಕಟ್ಟಿನ ಸ್ಥಿತಿ ಇದೆ. ಈ ಎಲ್ಲ ಸಮಸ್ಯೆ ನಿವಾರಣೆಗೆ ಹಾಲು ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವುದು ಅನಿವಾರ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ