- ಅಡಕೆ, ತೆಂಗು, ಬಾಳೆ, ಭತ್ತ, ಕೈತೋಟ, ನರ್ಸರಿಯಲ್ಲಿ ನೈಪುಣ್ಯತೆಕನ್ನಡಪ್ರಭ ವಾರ್ತೆ ದಾವಣಗೆರೆ ನವದೆಹಲಿಯ ಕೃಷಿ ಜಾಗರಣಾ ಸಂಸ್ಥೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಆಶ್ರಯದಲ್ಲಿ ವರ್ಷದ ಮಿಲೇನಿಯರ್ ರೈತ ಮಹಿಳೆ ಪ್ರಶಸ್ತಿಯನ್ನು ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಎಂ.ಜಿ. ಶಶಿಕಲಾ ಮೂರ್ತಿ ಅವರಿಗೆ ಲಭಿಸಿದೆ.
ಶಶಿಕಲಾ ಮೂರ್ತಿ ರೈತ ಕುಟುಂಬದಿಂದ ಬಂದ ಮಹಿಳೆ. ಚಿಕ್ಕ ವಯಸ್ಸಿನಲ್ಲೇ ಕೃಷಿ ಜವಾಬ್ದಾರಿಯನ್ನು ವಹಿಸಿಕೊಂಡವರು. ಸಾಧನೆಯಲ್ಲಿ ಸಾಕಷ್ಟು ಕಲ್ಲುಮುಳ್ಳಿನ ಹಾದಿ ಸಾಗಿಸಿದ್ದಾರೆ. ಕುಟುಂಬದ ಜವಾಬ್ದಾರಿ ಜೊತೆಗೆ ಸಂಘಟನಾ ಚತುರತೆಯುಳ್ಳ ಇವರು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅಡಕೆ, ತೆಂಗು, ಬಾಳೆ, ಭತ್ತ, ಕೈತೋಟ, ನರ್ಸರಿ ಹೀಗೆ ಹಲವಾರು ಕೃಷಿ ಬೆಳೆಗಳಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ವಲಯದ ಕಾರ್ಯದರ್ಶಿಯಾಗಿ, ಶ್ರೀ ವೀರೇಶ್ವರ ಪುಣ್ಯಾಶ್ರಮದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಪಾಧ್ಯಕ್ಷರಾಗಿ, ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವೈಜ್ಞಾನಿಕ ಸಲಹಾ ಮಂಡಳಿ ಸದಸ್ಯರಾಗಿ, ತೋಟಗಾರಿಕೆ ಇಲಾಖೆಯ ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಜಿಲ್ಲಾ ನಿರ್ದೇಶಕರಾಗಿ, ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಈ ಸಾಧನೆಗೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಡಾ. ಕೆ.ಪಿ. ಬಸವರಾಜ್, ಡಾ. ಟಿ.ಎನ್. ದೇವರಾಜ, ವಿಜ್ಞಾನಿಗಳ ತಂಡ ಮತ್ತು ಜಿಲ್ಲೆಯ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನವೇ ಕಾರಣ ಎಂದು ಶಶಿಕಲಾ ಮೂರ್ತಿ ತಿಳಿಸಿದ್ದಾರೆ.