ರಾಗಿ ಖರೀದಿ ಕೇಂದ್ರ: ರೈತರ ಸೋಗಿನಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಳ

KannadaprabhaNewsNetwork |  
Published : Feb 27, 2026, 01:45 AM IST
26ಕೆಎಂಎನ್ ಡಿ13,14 | Kannada Prabha

ಸಾರಾಂಶ

ನಾಗಮಂಗಲ ಪಟ್ಟಣದ ಹೊರವಲಯದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಎರಡು ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸೋಗಿನಲ್ಲಿ ಬರುವ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ತಾಲೂಕಿನ ರೈತರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಹೊರವಲಯದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಎರಡು ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸೋಗಿನಲ್ಲಿ ಬರುವ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ತಾಲೂಕಿನ ರೈತರು ಆರೋಪಿಸಿದ್ದಾರೆ.

ತಾಲೂಕಿನ ಗ್ರಾಮೀಣ ಪ್ರದೇಶದಿಂದ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದರೂ ಖರೀದಿ ಕೇಂದ್ರದ ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ರೈತರಿಂದ ರಾಗಿ ಖರೀದಿಸುವ ಸಮಯ ನಿಗಧಿಪಡಿಸಿ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ದಲ್ಲಾಳಿಗಳು ಕಲ್ಲು ಮಣ್ಣುಗಳಿಂದ ಕೂಡಿದ ಚೀಕಲು ರಾಗಿ ತಂದರೂ ಕೂಡ ಯಾವುದೇ ಪರೀಕ್ಷೆ ನಡೆಸದೆ ಚೀಲ ಬದಲಾಯಿಸಿಕೊಂಡು ರೈತರಿಂದ ಪಡೆದ ಗುಣಮಟ್ಟದರಾಗಿ ಚೀಲಗಳ ಜೊತೆಗೆ ಸೇರಿಸಿ ಕಳಪೆ ಗುಣ ಮಟ್ಟದ ರಾಗಿಯನ್ನೂ ಕೂಡ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಖರೀದಿ ಕೇಂದ್ರಕ್ಕೆ ರಾಗಿ ಪೂರೈಸಲು ಮೊದಲೇ ನೋಂದಣಿ ಮಾಡಿಸಿಕೊಂಡಿರುವ ರೈತರು ತಮಗೆ ನಿಗಧಿಯಾಗಿರುವ ದಿನಾಂಕದಂದು ಮಾತ್ರ ಖರೀದಿ ಕೇಂದ್ರಕ್ಕೆ ಟ್ರ್ಯಾಕ್ಟರ್‌ ಅಥವಾ ಗೂಡ್ಸ್ ವಾಹನಗಳಲ್ಲಿ ರಾಗಿ ತುಂಬಿದ ಚೀಲಗಳನ್ನು ತರುತ್ತಾರೆ. ಆದರೆ, ಕೆಲ ಮಧ್ಯವರ್ತಿಗಳು ರೈತರ ಸೋಗಿನಲ್ಲಿ ಪ್ರತಿನಿತ್ಯ ಖರೀದಿ ಕೇಂದ್ರದ ಬಳಿಯೇ ಇದ್ದು ತಾವು ತಂದಿರುವ ರಾಗಿಯನ್ನು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಎರಡೂ ರಾಗಿಖರೀದಿ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ತಾಲೂಕು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳಾದ ಪವಿತ್ರ ಮತ್ತು ಶ್ರೀನಿವಾಸ್ ಅವರು ಮಾತನಾಡಿ, ರೈತರಿಂದ ರಾಗಿ ಖರೀದಿಸಲು ಸರ್ಕಾರಿ ರಜಾ ದಿನ ಹೊರತುಪಡಿಸಿ ಪ್ರತಿನಿತ್ಯ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸಮಯ ನಿಗಧಿಪಡಿಸಿ ಒಂದು ಕೇಂದ್ರದಲ್ಲಿ ಪ್ರತಿನಿತ್ಯ 500 ಕ್ವಿಂಟಾಲ್‌ ರಾಗಿ ಖರೀದಿಸಲು ರೈತರಿಗೆ ಟೋಕನ್ ನೀಡಲಾಗುತ್ತಿದೆ. ನಂತರದ ಸಮಯದಲ್ಲಿ ಯಾವುದೇ ವ್ಯಕ್ತಿಗಳಿಂದ ರಾಗಿ ಖರೀದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಖರೀದಿ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕಿರುವುದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜವಾಬ್ದಾರಿ. ರಾಗಿ ಖರೀದಿಸಲು ನೋಂದಣಿ ಮಾಡುವ ಮತ್ತು ರಾಗಿ ಪಡೆಯುವ ಸಮಯದಲ್ಲಿ ರೈತರಿಂದ ಬಯೋಮೆಟ್ರಿಕ್ ಪಡೆಯುವುದರಿಂದ ಮಧ್ಯವರ್ತಿಗಳು ಯಾರೆಂದು ನಮಗೆ ಗೊತ್ತಾಗುವುದಿಲ್ಲ. ರಾಗಿಯ ಗುಣಮಟ್ಟ ಪರೀಕ್ಷೆ ನಡೆಸುವ ಕುರಿತು ಲೋಪವಿದ್ದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಟ್ರ್ಯಾಕ್ಟರ್‌ ಅಥವಾ ಗೂಡ್ಸ್ ವಾಹನಗಳಲ್ಲಿ ತರುವ ಕನಿಷ್ಠ 50 ರಿಂದ 100ಕ್ಕೂ ಹೆಚ್ಚು ಚೀಲಗಳನ್ನೆಲ್ಲಾ ಬಗೆದು ರಾಗಿಯ ಗುಣಮಟ್ಟ ಪರೀಕ್ಷೆ ನಡೆಸುತ್ತಾ ಕುಳಿತರೆ ರೈತರಿಂದ ರಾಗಿ ಖರೀದಿಸಲು ಆಗಲ್ಲ. ಹಾಗಾಗಿ ಒಂದು ಟ್ರಾಕ್ಟರ್‌ನಲ್ಲಿ ಎರಡು ಅಥವಾ ಮೂರು ಚೀಲಗಳಲ್ಲಿ ಸ್ವಲ್ಪ ರಾಗಿಯನ್ನು ತೆಗೆದು ಗುಣ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ.

-ಯೋಗೇಶ್, ರಾಗಿ ಖರೀದಿ ಕೇಂದ್ರದ ಗ್ರೇಡರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

]ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದರೆ ಜನ ನಂಬಲ್ಲ: ಶಾಸಕ ಗಣೇಶ್‌
ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ತರಗತಿಗಳು ವರದಾನ: ಡಾ.ಯೋಗೇಶ್