ರೈತ ದಿನಾಚರನೆ ಅಂಗವಾಗಿ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜನೆ
ಸಿರಿಧಾನ್ಯಗಳ ರಾಜ ಪೌಷ್ಠಿಕ ಅಹಾರದ ರಾಜನೆಂದೆ ಕರೆಸಿಕೊಂಡಿರುವ ರಾಗಿಯ ಬಗ್ಗೆ ರಾಗಿ ರುಚಿ ಎಂಬ ಒಂದು ವಿಭಿನ್ನ ಕಾರ್ಯಕ್ರಮವನ್ನು ಸೊಗಡು ಜಾನಪದ ಹೆಜ್ಜೆ, ಶ್ರೀ ಸತ್ಯ ಗಣಪತಿ ಸೇವಾ ಸಂಘ, ಕೃಷಿ ಇಲಾಖೆ, ಜೇಮ್ಸ್ ಫೌಂಡೇಶನ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಡಿ. 23 ಮತ್ತು 24ರಂದು ಏರ್ಪಡಿಸಲಾಗಿದೆ ಎಂದು ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು ತಿಳಿಸಿದರು.
ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸೊಗಡು ಜನಪದ ಹೆಜ್ಜೆಯು ಎರಡು ದಶಕಗಳಿಂದಲೂ ಗ್ರಾಮೀಣ ಭಾಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರುತ್ತಿದೆ. ಕಳೆದ ಬಾರಿ ಹಲಸಿನ ಹಬ್ಬದ ಆಚರಣೆ ಎಲ್ಲರ ಗಮನಸೆಳೆದಿತ್ತು. ಈ ಬಾರಿ ರೈತ ದಿನಾಚರಣೆ ಅಂಗವಾಗಿ ರಾಗಿ ರುಚಿ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಗಿ ಮುದ್ದೆ ಊಟ, ರಾಗಿ ಕಲ್ಲು ಬೀಸುವುದು, ರಾಗಿ ಬೆಳೆ ಸಂಬಂಧಿತ ಚಿತ್ರ ಬಿಡಿಸುವುದು, ರಾಗಿ ಚೀಲ ಎತ್ತುವ ಸ್ಪರ್ಧೆ, ರಾಗಿ ತಿನಿಸುಗಳ ರುಚಿ, ರಾಗಿ ಬಿತ್ತನೆ, ಒಕ್ಕಣೆ ಬಳಕೆ ಬಗ್ಗೆ ಪ್ರಬಂಧ ಹೀಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಅಲ್ಲದೆ ರಾಗಿ ಕಣ, ಕೃಷಿ ಪರಿಕಗಳ ಪ್ರದರ್ಶನ, ರಾಗಿ ತಳಿಗಳ ಪ್ರದರ್ಶನ ಹಾಗೂ ಮಾರಾಟ, ಮನರಂಜನೆ ಹಾಗೂ ಜ್ಞಾನಾರ್ಜನೆಗಾಗಿ ವಿಶೇಷ ಸ್ಪರ್ಧೆಗಳು, ರಾಗಿ ತಿನಿಸುಗಳ ಮಾರಾಟ, ರಾಗಿ ಉತ್ಪನ್ನಗಳ ಮಾರಾಟ ಮಳಿಗೆಗಳು ಹಾಗೂ ಹೋಟೆಲ್ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಗಿ ಪ್ರಿಯರಿಗಾಗಿ ತಿಂಡಿ ಮತ್ತು ಊಟದಲ್ಲಿ ರಾಗಿ ಮುದ್ದೆ, ಶ್ಯಾವಿಗೆ, ಇಡ್ಲಿ, ದೋಸೆ, ಅಂಬಲಿ, ಕಡುಬು ಹೀಗೆ ಹತ್ತಾರು ರಾಗಿ ಉತ್ಪನ್ನಗಳ ತಿನಿಸುಗಳು ಲಭ್ಯವಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ರೈತರು, ಮಹಿಳೆಯರು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ 8217032421, 9972499756, 9731420228 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸೊಗಡು ಜನಪದ ಹೆಜ್ಜೆಯ ಗೌರವಾಧ್ಯಕ್ಷ ಗುಂಗರಮಳೆ ನಿಸರ್ಗ ಪ್ರೇಮಿ ಮುರುಳೀಧರ್ ಮಾತನಾಡಿ, ಇಂದಿನ ಜನರಿಗೆ ಮಣ್ಣಿನ ಜೊತೆ ಹಾಗೂ ಗ್ರಾಮೀಣ ಭಾಗದ ಬೆಳೆಗಳ ಜೊತೆ ಸಂಪರ್ಕವನ್ನು ಕಲ್ಪಿಸಿ ಕೊಡುವ ಕಾರ್ಯಕ್ರಮವಾಗಿದ್ದು ಯುವ ಪೀಳಿಗೆಗೆ ಆಧುನಿಕ ಶೈಲಿ ಆಹಾರ ಪದ್ಧತಿಯಲ್ಲಿ ರಾಗಿ ರೊಟ್ಟಿ, ರಾಗಿ ಮುದ್ದೆ ಕಂಡು ಬರುತ್ತಿಲ್ಲ. ಆದ್ದರಿಂದ ರಾಗಿ ರುಚಿ ಕಾರ್ಯಕ್ರಮದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಆಯೋಜಕರಿಂದ ರಾಗಿ ರುಚಿ ಕಾರ್ಯಕ್ರಮದ ಕರಪತ್ರ ಬಿಡುಗಡೆ.