ಸುವರ್ಣ ಸೌಧದೆದರು ಕಾರಟಗಿ ವಿದ್ಯಾರ್ಥಿಗಳ ಜತೆ ಸಚಿವ ತಂಗಡಗಿ

KannadaprabhaNewsNetwork |  
Published : Dec 12, 2025, 02:30 AM IST
 | Kannada Prabha

ಸಾರಾಂಶ

ವಿದ್ಯಾರ್ಥಿಗಳಿಂದ ಉತ್ತರ ಬಾರದಿದ್ದಾಗ, ಯಾಕೆ ನಿಮಗೆ ಯಾರಿಗೂ ಎಂಎಲ್‌ಎ ಆಗಬೇಕು ಅನಿಸುತ್ತಿಲ್ಲ.

ಸುವರ್ಣ ಸೌಧ ಬೆಳಗಾವಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ನೋಡಲು ಆಗಮಿಸಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಫೋಟೋಗೆ ಫೋಸು ಕೊಟ್ಟು, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಚರ್ಚಿಸಿದರು.

ಸುವರ್ಣ ವಿಧಾನಸೌಧ, ಅಧಿವೇಶನ ಮತ್ತಿತರ ವಿಷಯವಾಗಿ ವಿದ್ಯಾರ್ಥಿಗಳ ಜತೆ ಮಾತಿಗಿಳಿದ ಸಚಿವರು, ಮುಂದೆ ನೀವೂ ಎಂ.ಎಲ್.ಎ. ಆಗ್ತೀರಾ? ಎಂದು ಕೇಳುತ್ತಿದ್ದಂತೆ ಮಾತಿನ ಗದ್ದಲಕ್ಕಿಳಿದಿದ್ದ ವಿದ್ಯಾರ್ಥಿಗಳು ಥ್ರಿಲ್ ಆದರು.

ವಿದ್ಯಾರ್ಥಿಗಳಿಂದ ಉತ್ತರ ಬಾರದಿದ್ದಾಗ, ಯಾಕೆ ನಿಮಗೆ ಯಾರಿಗೂ ಎಂಎಲ್‌ಎ ಆಗಬೇಕು ಅನಿಸುತ್ತಿಲ್ಲ. ಒಳಗೆ ಹೋಗಿ ಬನ್ನಿ, ಆಗಲಾದರೂ ಯಾರಾದರೂ ಆಗ್ತೇನೆ ಎಂದು ಹೇಳಬಹುದು ಎಂದರು.

ಆಗ, ನಾವೂ ಆಗಬಹುದಾ ಸರ್ ಎಂದು ವಿದ್ಯಾರ್ಥಿನಿಯೋರ್ವಳು ಕೇಳುತ್ತಿದ್ದಂತೆ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ನಿಗದಿತ ವಯೋಮಿತಿ ಆನಂತರ ಸಮಾಜದ ಸೇವೆಗಾಗಿ ಜನಪ್ರತಿನಿಧಿ ಆಗಲು ಮುಂದಾಗಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿ, ಸಂಗೊಳ್ಳಿ ರಾಯಣ್ಣ ಕುರಿತು ವಿವರಿಸುತ್ತ ಅವರ ಸಮಾಧಿ ಇಲ್ಲಿಯೇ ನಂದಗಢದಲ್ಲಿದೆ, ನೋಡಿಕೊಂಡು ಬನ್ನಿ ಎಂದರು.

ನಂದಗಢ ಬಳಿ ನಮ್ಮ ಇಲಾಖೆಯಿಂದ ಸಂಗೊಳ್ಳಿ ರಾಯಣ್ಣ ರಾಕ್‌ ಗಾರ್ಡನ್ ಮಾಡಿದ್ದೇವೆ‌. ಅದಿನ್ನೂ ಉದ್ಘಾಟನೆ ಆಗಿಲ್ಲ. ಆದರೆ ನೀವು ಅಲ್ಲಿಗೆ ಹೋಗುವುದಾದರೆ ನಾನು ನಿಮಗೆ ಅವಕಾಶ ನೀಡಲು ಹೇಳುತ್ತೇನೆ ಎಂದಾಗ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಖುಷಿ. ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು. ಇದಾದ ಮೇಲೆ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳಿ ಸಾಗುತ್ತಿದ್ದಂತೆ, ಮುಂದೆ ಮತ್ತೊಂದು ಶಾಲೆಯ ವಿದ್ಯಾರ್ಥಿಗಳು ಬಂದು ನಮ್ಮ ಜತೆ ಫೋಟೋ ತೆಗೆಸಿಕೊಳ್ಳಿ ಎಂದಾಗ ಆಯ್ತು ಎಂದು ಅವರೊಂದಿಗೂ ಫೋಟೋ ತೆಗೆಸಿಕೊಂಡರು.

ಪಿಎಸ್ ಮಧುಸೂದನ ರಡ್ಡಿ, ಆಪ್ತ ಸಹಾಯಕರಾದ ಮಹೇಶ, ಜಗದೀಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ