ಬೇಲೂರಿನಲ್ಲಿ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ: ಪತಿ ಬಂಧನ

KannadaprabhaNewsNetwork | Published : Sep 11, 2024 1:01 AM

ಸಾರಾಂಶ

ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಲೆಗೈದು ಶವವನ್ನು ಬಾವಿಗೆ ಹಾಕಿದ್ದ ಘಟನೆ ಮಂಗಳವಾರ ಬೆಳಿಗ್ಗೆ ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಶೀಲಾ ಮಥ ಮಹಿಳೆ, ಈ ಸಂಬಂಧ ಪತಿ ಜಗದೀಶ್‌ನನ್ನು ಬಂಧಿಸಲಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಕೃತ್ಯ । ತಾನೇ ಕೊಂದು ಆತ್ಮಹತ್ಯೆ ಎಂದಿದ್ದ ಪತಿ

ಕನ್ನಡಪ್ರಭ ವಾರ್ತೆ ಬೇಲೂರು

ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಲೆಗೈದು ಶವವನ್ನು ಬಾವಿಗೆ ಹಾಕಿದ್ದ ಘಟನೆ ಮಂಗಳವಾರ ಬೆಳಿಗ್ಗೆ ತಾಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಶೀಲಾ ಎಂಬುವವರು ಇದೇ ಕಳೆದ ಮೂರು ದಿನಗಳ ಹಿಂದೆ ಗಣಪತಿ ನೋಡಲು ಮನೆಯಿಂದ ಹೋದ ಅವರು ಕಾಣೆಯಾಗಿದ್ದಾರೆಂದು ಅವರ ಮಗಳು ವಿನುತಾ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಸುಮಾರು ೪೫ ವರ್ಷದ ಮಹಿಳೆಯ ಶವ ಬಾವಿಯಲ್ಲಿ ತೇಲುತ್ತಿತುವುದನ್ನು ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಮೂರು ದಿನಗಳ ಹಿಂದಷ್ಟೇ ಕಾಣೆಯಾಗಿದ್ದ ಶೀಲಾ ಎಂಬುವವರ ಮೃತದೇಹ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೇಲೂರು ಪಿಎಸ್ಐ ಪ್ರವೀಣ್ ಕುಮಾರ್ ಪರಿಶೀಲನೆ ನಡೆಸಿ ಆರೋಪಿ ಜಗದೀಶ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?:

ಶೀಲಾ ಹಾಗೂ ಪತಿ ಜಗದೀಶ್ ಎಂಬುವವರು ಪ್ರತಿನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಪ್ರತಿನಿತ್ಯ ಕುಡಿದು ಬಂದು ಮಕ್ಕಳು ಹಾಗೂ ಹೆಂಡತಿ ಮೇಲೆ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತು ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಬೇರೆ ವಾಸ ಮಾಡಿ ಜೀವನ ಸಾಗಿಸುತ್ತಿದ್ದರು. ಅಲ್ಲದೆ ಎರಡು ಮೂರು ಬಾರಿ ಪತಿ ಜಗದೀಶ್‌ನಿಂದ ಮಾನಸಿಕ ಕಿರುಕುಳ ಅನುಭವಿಸಿ ಬೇಲೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೋಲಿಸರು ಬುದ್ದಿವಾದ ಹೇಳಿ ಕಳಿಸಿದ್ದರು. ಗೌರಿ ಹಬ್ಬದ ದಿನದಂದು ತಮ್ಮ ಗ್ರಾಮದಲ್ಲಿ ಗಣಪತಿ ನೋಡಿಕೊಂಡು ಬರುವುದಾಗಿ ಮಕ್ಕಳಿಗೆ ಹೇಳಿ ಮನೆಯಿಂದ ಶೀಲಾ ತೆರಳಿದ್ದರು. ಈ ಸಂದರ್ಭದಲ್ಲಿ ಪತಿ ಜಗದೀಶ್‌ ಶೀಲಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ಕೊಲೆ ಮಾಡಿದ್ದಾನೆ. ನಂತರ ಗುರುತು ಸಿಗದಂತೆ ಹೊಲದಲ್ಲಿ ಇದ್ದ ಬಾವಿಗೆ ಎರಡು ಕಾಲುಗಳಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದು ನಂತರ ತಲೆಮರೆಸಿಕೊಂಡಿದ್ದನು.

Share this article