ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹಾಲು ಉತ್ಪಾದಕರಿಗೆ ರಾಜ್ಯದಲ್ಲಿ ನೀಡಬೇಕಾದ ಪ್ರೋತ್ಸಾಹಧನದ ಬಗ್ಗೆ ಸಂಬಂಧಪಟ್ಟ ಸರ್ಕಾರದ ಸಚಿವರ ಗಮನ ಸೆಳೆದ ಹಿನ್ನೆಲೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್ ಪ್ರತಿಕ್ರಿಯಿಸಿ, ಆಗಸ್ಟ್ 2024ರಿಂದ ಅಕ್ಟೋಬರ್ ತನಕ 3 ತಿಂಗಳ ಬಾಕಿ 347 ಕೋಟಿ ರು. ಬಾಕಿ ನೀಡಬೇಕಿದೆ, ಅದೇ ರೀತಿ ಪರಿಶಿಷ್ಟ ಪಂಗಡದ ಹಾಲು ಉತ್ಪಾದಕರಿಗೆ 2 ತಿಂಗಳ 6.85 ಕೋಟಿ ರು., ಪರಿಶಿಷ್ಟ ಜಾತಿಯ ಹಾಲು ಉತ್ಪಾದಕ ರೈತರಿಗೆ 9 ಕೋಟಿ ರು. ಬಾಕಿ ನೀಡಬೇಕಿದ್ದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸಚಿವರು ಉತ್ತರಿಸಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7 ಪ್ರತ್ಯಕ್ಷ ಗಣಿ ಬಾಧಿತ ಮತ್ತು 9 ಪರೋಕ್ಷ ಗಣಿ ಬಾಧಿತ ಪ್ರದೇಶ ಸೇರಿ 16 ಗಣಿ ಬಾಧಿತ ಪ್ರದೇಶಗಳಿವೆ ಎಂದು ಗಣಿ ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಉಪ ಖನಿಜ ಸಂಬಂಧ ನಿಯಾಮಾನುಸಾರ ಖಜಾನೆಗೆ 45.82 ಲಕ್ಷ ರು. ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರು ಮಾಹಿತಿ ನೀಡಿದ್ದಾರೆ. 2017 ರಿಂದ 2024ರ ನವೆಂಬರ್ ತಿಂಗಳವರೆಗೂ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ತಾಲೂಕು ಗಣಿಗಾರಿಕಾ ಪ್ರದೇಶಗಳಿಂದ 3878 ಲಕ್ಷ ರು.ಗಳ ಮೊತ್ತ ಸಂಗ್ರಹವಾಗಿದೆ ಎಂದಿದ್ದಾರೆ.
ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಕ್ಷೇತ್ರ ರೇಷ್ಮೆ ಚಟುವಟಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಿರುಪಯುಕ್ತವಾಗಿರುವ ರೇಷ್ಮೆ ಇಲಾಖೆಯ ಕಟ್ಟಡಗಳ ಬಳಕೆಗೆ ಕ್ರಮ ಏನೆಂದು ಪ್ರಶ್ನೆ ಎತ್ತಿದ್ದಾರೆ. ಕ್ಷೇತ್ರದಲ್ಲಿರುವ 66 ರೇಷ್ಮೆ ಇಲಾಖೆ ಕಟ್ಟಡಗಳ ಪೈಕಿ ೨೪ ಕಟ್ಟಡಗಳನ್ನು ಬಳಕೆ ಮಾಡಲಾಗುತ್ತಿದೆ. 42 ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಯೋಗ್ಯವಲ್ಲದ ಕಟ್ಟಡವನ್ನು ನಿಯಮಾನುಸಾರ ಲೋಕೋಪಯೋಗಿ ಇಲಾಖೆ ವತಿಯಿಂದ ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರು ಉತ್ತರಿಸಿದ್ದಾರೆ.