ಅಧಿಕಾರಿಗಳ ವರ್ಗಾವಣೆಗೆ ಶಾಸಕ ಚಿಮ್ಮನಕಟ್ಟಿ ಸೂಚನೆ

KannadaprabhaNewsNetwork |  
Published : Jun 10, 2026, 04:00 AM IST
09ಚಛಧಂ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾದಾಮಿಕೆಲವು ಇಲಾಖೆಗಳಲ್ಲಿ ಬಹು ವರ್ಷಗಳಿಂದ ಹಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಬೇರೂರಿರುವುದರಿಂದ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ಕಾರಣವಾಗಿದ್ದು, ಅಂಥವರನ್ನು ಶೀಘ್ರವೇ ವರ್ಗಾಯಿಸಿ ಆಡಳಿತ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಕೆಲವು ಇಲಾಖೆಗಳಲ್ಲಿ ಬಹು ವರ್ಷಗಳಿಂದ ಹಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಬೇರೂರಿರುವುದರಿಂದ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ಕಾರಣವಾಗಿದ್ದು, ಅಂಥವರನ್ನು ಶೀಘ್ರವೇ ವರ್ಗಾಯಿಸಿ ಆಡಳಿತ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ತಾ.ಪಂ ಸಭಾಭವನದಲ್ಲಿ ಸೋಮವಾರ ಜರುಗಿದ ಕೆಡಿಪಿ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಭೆಗೆ ಗೈರಾಗಿರುವ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಅವರಿಂದ ಸಮಂಜಸ ಉತ್ತರ ಪಡೆಯಿರಿ ಎಂದು ತಾ.ಪಂ ಇಒಗೆ ಸೂಚಿಸಿದರು.

ಸಮವಸ್ತ್ರ ಶೀಘ್ರ ವಿತರಣೆ: ಈಗಾಗಲೇ ತಾಲೂಕಿನ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳ ವಿತರಣೆ ಆಗಿದ್ದು, ಮಾರಾಟ ಪುಸ್ತಕಗಳಲ್ಲಿ ಶೇ.20ರಷ್ಟು ಮಾತ್ರ ವಿತರಿಸಲಾಗಿದೆ. ಶೂ ಮತ್ತು ಸಮವಸ್ತ್ರಗಳು 2-3 ದಿನಗಳಲ್ಲಿ ಬರಲಿದ್ದು, ಶೀಘ್ರ ವಿತರಿಸಲಾಗುವುದು ಎಂದು ಬಿಇಒ ಕೇಶವ ಪೆಟ್ಲೂರ ಹೇಳಿದರು.

ತಾಲೂಕಿನಲ್ಲಿರುವ ಬರುವ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಮತ್ತು ಕಾಂಪೌಂಡ್ ಒದಗಿಸಬೇಕು. ಈ ಮೂಲಸೌಕರ್ಯ ಒದಗಿಸುವಲ್ಲಿ ಪಿಡಿಒ, ಶಿಕ್ಷಣ ಇಲಾಖೆ ಜಂಟಿಯಾಗಿ ಸಹಕಾರದಿಂದ ಕೆಲಸ ಮಾಡಬೇಕು. ಜತೆಗೆ ಕಾಲಮಿತಿಯಲ್ಲಿ ಅವಧಿಗೆ ಕೊನೆಗೆ ನರೇಗಾ ಯೋಜನೆಯಲ್ಲಿ ಅನುದಾನ ಒದಗಿಸಿ ಅನುಷ್ಠಾನಗೊಳಿಸಬೇಕೆಂದು ಶಾಸಕ ಚಿಮ್ಮನಕಟ್ಟಿ ಸಲಹೆ ನೀಡಿದರು. ತಾಲೂಕಿನಲ್ಲಿ ಜೆ.ಜೆ.ಎಂ. ಯೋಜನೆಯಡಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಭೆಯಲ್ಲಿ ಸದಸ್ಯರು ದೂರಿದಾಗ ಈ ಬಗ್ಗೆ ಅಧಿಕಾರಿ ನವೀನ್ ಹುಚರೆಡ್ಡಿ ನೀಡಿದ ಮಾಹಿತಿ ಬಗ್ಗೆ ಶಾಸಕರು ಸುದೀರ್ಘ ಚರ್ಚೆ ನಡೆಸಿದರು.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ: ಜೆಜೆಎಂ ಅನುಷ್ಠಾನ ಮಾಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ರಾಗಿಯಿಲ್ಲಿ ಪ್ರಕರಣ ದಾಖಲಿಸಿ ಎಂದು ಹೇಳಿದ ಶಾಸಕ ಚಿಮ್ಮನಕಟ್ಟಿ ಈ ವಿಷಯವಾಗಿ ಸದನದಲ್ಲಿ ಮತ್ತು ಜಿಲ್ಲಾ ಕೆಡಿಪಿ ಸಭೆಯಲ್ಲಿಯೂ ಚರ್ಚಿಸಿಯೇ ಇದರ ವಿರುದ್ಧ ಕ್ರಮ ಕೈಗೊಳ್ಳಲು ಠರಾವು ಪಾಸ್ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಕೃಷಿ ಇಲಾಖೆ ವರದಿ: ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಬೀಜ ಮತ್ತು ಗೊಬ್ಬರದ ಸಂಗ್ರಹವಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಹೇಳಿದರು.

ಆದರೆ ಹವಾಮಾನ ಇಲಾಖೆಯ ವರದಿ ಪ್ರಕಾರ ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತದೆಂದು ಮಾಹಿತಿ ಇದ್ದು ಹೀಗಾಗಿ ಬೆಳೆ ಪ್ರಮಾಣದಲ್ಲಿಯೂ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದಾಗ ಶಾಸಕರು ಈ ಬಗ್ಗೆ ತಾಲೂಕಿನ ರೈತರಲ್ಲಿ ಅರಿವು ಮೂಡಿಸಿ ಅವರನ್ನು ಜಾಗೃತಗೊಳಿಸುವ ಕೆಲಸ ನಿಮ್ಮ ಇಲಾಖೆಯಿಂದ ಮಾಡಬೇಕು ಎಂದು ಹೇಳಿ ಬೀಜ, ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.

32 ಕೃಷಿ ಹೊಂಡಗಳು ಬಂದಿದ್ದು, ಅರ್ಹರಿಗೆ ತಲಾ ಎರಡು ಲಕ್ಷ ರೂ.ವರೆಗೆ ರಿಯಾಯಿತಿ ದೊರಕಲಿದ್ದು, ಇದಕ್ಕೆ ಬೇಕಾದ ಪರಿಕರಗಳನ್ನು ಇಲಾಖೆಯಿಂದ ಕೊಡಲಾಗುವುದು. 259 ಹೆಕ್ಟೇರ್ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಅಧಿಕಾರಿ ಬಾಲನಗೌಡ ಪಾಟೀಲ ಹೇಳಿದರು.

ಕಂದಾಯ ಇಲಾಖೆ: ತಾಲೂಕಿನ ಹೊಸೂರು ಗ್ರಾಮ ವ್ಯಾಪ್ತಿಯ ಗಿಡ್ಡನಾಯಕನಾಳ, ಹಣಾಪುರ, ರಾಧಾಪುರ ಮತ್ತು ತೋಗುಣಸಿ ಕಂದಾಯ ಗ್ರಾಮಗಳಲ್ಲಿ ಅಲ್ಲಿನ ಫಲಾನುಭವಿಗಳಿಗೆ ಜೂ.25 ರೊಳಗಾಗಿ ಹಕ್ಕು ಪತ್ರ ನೀಡಲಾಗುತ್ತಿದ್ದು ಇವುಗಳನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಶಾಸಕರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಮಾಸಾಶನಕ್ಕೆ ಜನರನ್ನು ಅಲೆದಾಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ನಿರ್ಲಕ್ಷ್ಯ ಸಹಿಸಲಾಗದು. ಕೂಡಲೇ ಎಲ್ಲ ಮಾಸಾಶನಗಳನ್ನು ಫಲಾನುಭವಿಗಳ ಹೆಸರಿಗೆ ಮಂಜೂರಿ ಮಾಡಿ ಎಂದು ಚಿಮ್ಮನಕಟ್ಟಿ ಹೇಳಿದರು.

ಸಾರಿಗೆ, ಪಶು ವೈದ್ಯಕೀಯ, ಪುರಸಭೆ, ಹೆಚ್.ಎಂ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವಲೋಕಿಸಿದರು.

ಸಭೆಯಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಈರನಗೌಡ ಕೆರಿಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ.ಬುದಿಹಾಳ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಪಿಡಿಒ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ
ರಸ್ತೆ ಅಪಘಾತ ಯೋಧನ ದುರ್ಮರಣ