ಕಳ್ಳತನವಾಗಿದ್ದ ಮನೆಗೆ ಶಾಸಕ, ಮಾಜಿ ಶಾಸಕ ಭೇಟಿ

KannadaprabhaNewsNetwork | Published : Sep 13, 2024 1:39 AM

ಸಾರಾಂಶ

ಬಾಗಿಲು ಮುರಿದು ಚಿನ್ನಾಭರಣ ನಗದು ಕಳ್ಳತನವಾಗಿದ್ದ ಚಿನ್ನದೊರೆ ಮನೆಗೆ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಮಾಜಿ ಶಾಸಕ ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಕನ್ನಡಪ್ರಭ ವಾರ್ತೆ ಹನೂರು

ಬಾಗಿಲು ಮುರಿದು ಚಿನ್ನಾಭರಣ ನಗದು ಕಳ್ಳತನವಾಗಿದ್ದ ಚಿನ್ನದೊರೆ ಮನೆಗೆ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಮಾಜಿ ಶಾಸಕ ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.ಪಟ್ಟಣದ 11ನೇ ವಾರ್ಡಿನ ಚಿನ್ನದೊರೆ ಮನೆಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹನೂರು ಪಟ್ಟಣದ 11ನೇ ವಾರ್ಡಿನ ಚಿನ್ನ ದೊರೆ ಧನಲಕ್ಷ್ಮಿ ಮನೆಯಲ್ಲಿ ಸೋಮವಾರ ತಡರಾತ್ರಿ ಖದೀಮರು ಮನೆಯ ಬಾಗಿಲು ಮುರಿದು ಮಗಳ ಮದುವೆಗೆ ಕೂಡಿಟ್ಟಿದ್ದ ಅರ್ಧ ಕೆಜಿ ಚಿನ್ನ, 20 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಅಧಿಕಾರಿ ಕೆ.ಟಿ. ಕವಿತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸ್ ತಂಡ ರಚನೆ ಮಾಡಿ ಖದೀಮ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.ಪಟ್ಟಣದ 11ನೇ ವಾರ್ಡಿನ ಶಾಸಕರ ವಾಸ್ತವ್ಯ ಮಾಡಿರುವ ಮನೆಯ ಸಮೀಪವೇ ಚಿನ್ನಾಭರಣ ನಗದು ಕಳತನವಾಗಿರುವ ಬಗ್ಗೆ ಶಾಸಕ ಎಂಆರ್ ಮಂಜುನಾಥ್ ಚಿನ್ನ ದೊರೆ ಮನೆಗೆ ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರಿಂದ ಚಿನ್ನಾಭರಣ ನಗದು ಕಳೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಧೈರ್ಯ ನೀಡಿದರು.

ಪೊಲೀಸರಿಗೆ ಸೂಚನೆ:

ಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಕಳ್ಳತನವಾಗಿರುವ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಹೀಗಾಗಿ ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆಯಾ ಆಯಾಮಗಳಲ್ಲಿ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಪಿಎಸ್ಐ ಮಂಜುನಾಥ್ ಪ್ರಸಾದ್ ಅವರಿಗೆ ಸೂಚನೆ ನೀಡಿದರು. ಜೊತೆಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪಟ್ಟಣದಲ್ಲಿ ಹೆಚ್ಚು ಪೊಲೀಸರನ್ನು ಗಸ್ತು ಯೋಜನೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.ಪಟ್ಟಣದ ವಾರ್ಡ್‌ಗಳಲ್ಲಿ ಬೀದಿ ದೀಪ ಅಳವಡಿಸಿ:

13 ವಾರ್ಡ್‌ಗಳಲ್ಲಿಯೂ ಪಪಂ ವತಿಯಿಂದ ಬೀದಿ ದೀಪವನ್ನು ಅಳವಡಿಸಿ. ರಾತ್ರಿ ವೇಳೆ ಕಗ್ಗತ್ತಲು ಅನೇಕ ಕಡೆ ಇರುವುದು ತಿಳಿದು ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಪಂ ವತಿಯಿಂದ ಬೀದಿ ದೀಪ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಎಂಆರ್ ಮಂಜುನಾಥ್ ಉಪಾಧ್ಯಕ್ಷ ಆನಂದ್ ಅವರಿಗೆ ತಿಳಿಸಿದರು.

ಇದೇ ವೇಳೆಯಲ್ಲಿ ಪಪಂ ಉಪಾಧ್ಯಕ್ಷ ಆನಂದ್ ಕುಮಾರ್ ಮುಖಂಡರಾದ ವಿಜಯಕುಮಾರ್, ಮಂಜೇಶ್, ರಾಜು ನಾಯ್ಡು, ಪೋಲಿಸ್ ಸಿಬ್ಬಂದಿ ಉಪಸಿತರಿದ್ದರು. ಮಾಜಿ ಶಾಸಕರು ಭೇಟಿ: ಪಟ್ಟಣದ 11ನೇ ವಾರ್ಡಿನ ಚಿನ್ನದೊರೆ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಆಗಿರುವ ಬಗ್ಗೆ ಮಾಜಿ ಶಾಸಕ ನರೇಂದ್ರ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.ಎಸ್ಪಿ ಕವಿತಾ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ಹಂತದಲ್ಲಿ ಇರುವ ಬಗ್ಗೆ ಇಷ್ಟು ದೊಡ್ಡ ಪ್ರಮಾಣದ ಮಟ್ಟದಲ್ಲಿ ಕಳ್ಳತನವಾಗಿರಲಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಜನತೆ ಆತಂಕಕ್ಕೆ ಎಡೆಮಾಡಿದೆ. ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಳ್ಳತನ ಪ್ರಕರಣವನ್ನು ತುರ್ತಾಗಿ ಭೇದಿಸಿ ಲಕ್ಷಾಂತರ ರು.ಹಣ ಮತ್ತು ಚಿನ್ನಾಭರಣವನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳ ಜೊತೆ ತಿಳಿಸಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಶೇಷ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಇಂತಹ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕುಟುಂಬದವರು ಯಾವುದೇ ಕಾರಣಕ್ಕೂ ಧೃತಿಗೆಡದೆ ಇರುವಂತೆ ತಿಳಿಸಿದರು.

ಕಳ್ಳತನ ಘಟನೆಯ ಬಗ್ಗೆ ಚಿನ್ನ ದೊರೆ ಮಾತನಾಡಿ, ನನ್ನ ಮೂರನೇ ಮಗಳು ದರ್ಶಿನಿ ರಾಜಸ್ಥಾನ ಜೈಪುರದಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಬರುವ ಸಂಬಳವನ್ನು ನಮಗೆ ಕಳಿಸಿದ್ದರು. ನಾವು ನಮ್ಮ ಊರಿನಲ್ಲಿ ಇದ್ದ ಜಮೀನು ಮಾರಾಟ ಮಾಡಿ ಮದುವೆಗಾಗಿ 20 ಲಕ್ಷ ನಗದು ಚಿನ್ನಾಭರಣ ಖರೀದಿ ಮಾಡಿ ಮನೆಯಲ್ಲಿ ತಮಿಳುನಾಡಿಗೆ ತೆರಳಿ ವಾಪಸ್ ಮಧ್ಯರಾತ್ರಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಜಿ ಶಾಸಕರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪಪಂ ಮಾಜಿ ಉಪಾಧ್ಯಕ್ಷ ಮಾದೇಶ್ ಮುಖಂಡರಾದ ರಮೇಶ್ ನಾಯ್ಡು, ರಾಜೇಶ್ ಪ್ರದೀಪ್ ನಾಯ್ಡು, ನಾಗೇಶ್ ವೆಂಕಟೇಶ್ ಹಾಜರಿದ್ದರು.

Share this article