ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ಶಂಕರನಾರಾಯಣ ಹೋಬಳಿ ಕೇಂದ್ರ ರಚನೆ ಮಾಡುವಂತೆ ಮುಂಗಾರು ಅಧಿವೇಶನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಶಂಕರನಾರಾಯಣ ಕೇಂದ್ರೀಕೃತವಾಗಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಪ್ರಸ್ತುತ ಸುಮಾರು 40 ಕಿ. ಮೀ ದೂರದ ಹೋಬಳಿ ಕೇಂದ್ರಕ್ಕೆ ತೆರಳಬೇಕಾಗಿರುವುದರಿಂದ ಪ್ರಸ್ತುತ ಇರುವ ಬೈಂದೂರು ಹಾಗೂ ವಂಡ್ಸೆ ಹೋಬಳಿಗಳ ಜೊತೆಗೆ ಶಂಕರನಾರಾಯಣ ಗ್ರಾಮ ಕೇಂದ್ರಿತವಾಗಿ ಶಂಕರನಾರಾಯಣ ಭಾಗದ ಗ್ರಾಮಗಳನ್ನು ಸೇರಿಸಿ ಕೊಂಡು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ಯೇಕವಾದ ಶಂಕರ ನಾರಾಯಣ ಹೋಬಳಿ ರಚನೆ ಮಾಡಬೇಕು ಎಂದವರು ಆಗ್ರಹಿಸಲಾಗಿದೆ.ಶಾಸಕರ ಪ್ರಸ್ತಾವನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಹೊಸದಾಗಿ ಹೋಬಳಿಗಳನ್ನು ರಚಿಸುವ ವಿಷಯವು ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದಾಗಿದೆ. ನೂತನ ಹೋಬಳಿಗಳು ರಚಿಸಬೇಕಾದರೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಹ ಅವಲಂಬಿಸಿರುತ್ತದೆ. ಅಲ್ಲದೆ ಆರ್ಥಿಕ ಇಲಾಖೆಯೂ ಸಹ ಇಂತಹ ಪ್ರಸ್ತಾವನೆಗೆ ಸಹಮತಿ ನೀಡಬೇಕಾ ಗಿರುತ್ತದೆ. ತುರ್ತಾಗಿ ರಾಜ್ಯದಲ್ಲಿ ಹೊಸದಾಗಿ ಹೋಬಳಿಗಳನ್ನು ರಚಿಸಲು ಸರ್ಕಾರವು ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.