ಕನ್ನಡಪ್ರಭ ವಾರ್ತೆ ಅರಕಲಗೂಡು ಜೀವನದಲ್ಲಿ ನಾವು ಹೇಗೆ ಬದುಕಬೇಕೆಂಬುದಕ್ಕೆ ರಾಮಾಯಣವನ್ನು ಆದರ್ಶವನ್ನಾಗಿ ಇಟ್ಟುಕೊಳ್ಳಬಹುದು ಎಂದು ಶಾಸಕ ಎ. ಮಂಜು ತಿಳಿಸಿದರು. ಪಟ್ಟಣದ ಡಿ.ದೇವರಾಜ ಅರಸು ಭವನ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ರಾಮಾಯಣವನ್ನು ಆದರ್ಶವಾಗಿಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ಪ್ರಪಂಚದಲ್ಲೇ ಶ್ರೇಷ್ಠ ವ್ಯಕ್ತಿ ಮಹರ್ಷಿ ವಾಲ್ಮೀಕಿ. ಅವರು ಬರೆದ ರಾಮಾಯಣದ ನಿದರ್ಶನಗಳನ್ನು ಅಸೆಂಬ್ಲಿ, ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತೇವೆ. ಆದರೆ ಅಳವಡಿಸಿಕೊಂಡಿದ್ದೀವಾ ಎಂಬುದನ್ನು ನಾನು ಸೇರಿದಂತೆ ಎಲ್ಲರೂ ಯೋಚಿಸಬೇಕಿದೆ. ಪ್ರತಿಯೊಬ್ಬರು ರಾಮಾಯಣ, ಮಹಾಭಾರತ ಪುಸ್ತಕವನ್ನು ಓದಲೇಬೇಕು. ಆಗ ನಮ್ಮ ತಪ್ಪಿನ ಅರಿವಾಗುತ್ತದೆ ಎಂದು ಹೇಳಿದರು. ಕೊಣನೂರು ಬಿ. ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಮಾತನಾಡಿ, ಬೇಡರ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಮಹಾನ್ ಮಾನವತಾವಾದಿಯಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಮಹಾಕಾವ್ಯ ನೀಡಿದ ಆದಿಕವಿ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಬಿಇಒ ದೇವರಾಜ್, ತಾಪಂ ಇಒ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಪಪಂ ಸದಸ್ಯರಾದ ಹೂವಣ್ಣ, ಪ್ರದೀಪ್, ರಶ್ಮಿ, ಕೃಷ್ಣಯ್ಯ, ಮತ್ತಿತರಿದ್ದರು.