ಹಳಿಯಾಳ: ಭಾರತ ಕಂಡ ಹಿರಿಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿರುವುದು ವಿಷಾದನೀಯ ಎಂದು ಶಾಸಕ ಆರ್.ವಿ. ದೇಶಪಾಂಡೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಶನಿವಾರ ಶಾಸಕರ ಕಾರ್ಯಾಲಯವು ಸಂತಾಪ ಸಂದೇಶ ಬಿಡುಗಡೆ ಮಾಡಿದೆ. ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯಸಭೆ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿ ಹಾಗೂ ಕರ್ನಾಟಕ ಸರ್ಕಾರದ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಎಂದಿದ್ದಾರೆ.21ನೇ ಶತಮಾನದ ಶಿಕ್ಷಣದ ಆಶೋತ್ತರಗಳನ್ನು ಕೈಗೂಡಿಸುವಂತೆ ಮಾಡುವ ಹೊಸ ವ್ಯವಸ್ಥೆಯಾದ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವುದರಲ್ಲಿ ಇವರ ನೇತೃತ್ವದ ಸಮಿತಿ ನೀಡಿದ ಕೊಡುಗೆ ಗಣನೀಯ ಎಂದು ಹೇಳಿದ್ದಾರೆ.
ಪಶ್ಚಿಮ ಘಟ್ಟಗಳ ಪರಿಸರದ ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ 2013ರಲ್ಲಿ ವರದಿ ಕೊಟ್ಟಿದ್ದರು. ಇವರ ಸಾಧನೆಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992), ಪದ್ಮವಿಭೂಷಣ (2000) ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.ಬಾಹ್ಯಾಕಾಶ ಕ್ಷೇತ್ರವಲ್ಲದೇ ರಾಜಕೀಯ, ಶಿಕ್ಷಣ, ಪರಿಸರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದ ಡಾ.ಕೆ.ಕಸ್ತೂರಿರಂಗನ್ ಸಾಧನೆ ಅಜರಾಮರವಾಗಿದೆ.
ನನಗೆ ತುಂಬ ಆತ್ಮೀಯರಾಗಿದ್ದ ಡಾ.ಕೆ.ಕಸ್ತೂರಿರಂಗನ್ 2018ರಲ್ಲಿ ಡಿಸೆಂಬರ್ 2 ರಂದು ಹಳಿಯಾಳಕ್ಕೆ ಆಗಮಿಸಿ ನಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಟ್ರಸ್ಟ್ನ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿ ವರ್ಗದವರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ಸ್ಮರಿಸಬಹುದು ಎಂದು ಹೇಳಿದ್ದಾರೆ.ನಮ್ಮ ರಾಜ್ಯದ ಬಗ್ಗೆ ಇವರಿಗೆ ಅಪಾರ ಪ್ರೀತಿ, ಕಾಳಜಿ ಇತ್ತು. ಅವರ ಅಗಲಿಕೆಯ ದುಃಖದಲ್ಲಿ ಭಾಗಿಯಾಗಿದ್ದು, ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.