ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಒಂದು ಪದ ತಪ್ಪಾಗಿ ಅರ್ಥೈಸಲ್ಪಟ್ಟ ಬಗ್ಗೆ ಆತ್ಮಾವಲೋಕನ ಉಂಟಾಗಿದೆ ಎಂದು ತಿಳಿದುಬಂದಿದೆ. ನನ್ನಿಂದ ನಿರ್ಲಕ್ಷ್ಯದಿಂದ ಹೇಳಲ್ಪಟ್ಟ ಮಾತುಗಳು ಸಭಾಪತಿ ರುದ್ರಪ್ಪ ಲಮಾಣಿ ಅಥವಾ ಹಿಂದುಳಿದ ವರ್ಗದ ಸಮಾಜದ ಜನರಿಗೆ ಮನಸ್ಸಿಗೆ ನೋವು ತಂದಿದ್ದರೆ, ನಾನು ನನ್ನ ಹೃದಯಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ನನ್ನ ಉದ್ದೇಶ ಯಾವುದೇ ರೀತಿಯ ಅಗೌರವ ಸೂಚಿಸುವ ಅಥವಾ ನಿರ್ದಿಷ್ಟ ಸಮುದಾಯದ ವಿರುದ್ಧ ಆಗಿರಲಿಲ್ಲ.ವಿಧಾನಮಂಡಲವೇ ಪ್ರತಿಪಕ್ಷಗಳಿಗೂ, ಎಲ್ಲ ಸಮುದಾಯಗಳಿಗೂ, ಎಲ್ಲ ಧ್ವನಿಗೂ ಸಮಾನ ವೇದಿಕೆಯಾಗಬೇಕು. ಸದನದ ಶಿಸ್ತಿಗೆ ನಾನು ಸದಾ ಬದ್ಧನಾಗಿದ್ದೇನೆ. ಯಾವುದೇ ರೀತಿಯ ಮಾತುಗಳಿಂದ ಸಂಘಟಿತ ಸಮಾಜದಲ್ಲಿ ಭೇದ ಸೃಷ್ಟಿಯಾಗಬಾರದು ಎಂಬ ನಿಲುವು ನನ್ನದು ಎಂದರು.
ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ರುದ್ರಪ್ಪ ಲಮಾಣಿ ಅವರು ಸದನದಲ್ಲಿ ತೋರಿದ ನಿಯಮಾನುಸಾರ ನಿರ್ವಹಣೆಯ ಬಗ್ಗೆ ಮಾತನಾಡಿದ ಶಾಸಕರು, ಸಭಾಪತಿಯು ಸದನದ ಶ್ರೇಷ್ಠತೆಯ ಪ್ರತೀಕ. ಅವರ ಸ್ಥಾನಕ್ಕೆ ನನ್ನ ಪೂರ್ಣ ಗೌರವವಿದೆ. ನಾನು ಮಾತನಾಡಿದ ಸಂದರ್ಭದ ಭಾಷೆಯ ಅರ್ಥವನ್ನು ಅರ್ಥೈಸಿಕೊಳ್ಳುವಲ್ಲಿ ತಪ್ಪು ಸಂಭವಿಸಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.ಹಿಂದುಳಿದ ವರ್ಗದ ಜನತೆ ಮತ್ತು ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹಾಗೂ ಅವರು ಪ್ರತಿನಿಧಿಸುವ ಜನತೆಗೆ ಯಾವುದೇ ರೀತಿಯ ಅನ್ಯಾಯ ನಡೆಯದಂತೆ ಗಮನ ಹರಿಸುತ್ತಿರುವುದಾಗಿ ಶಾಸಕರು ತಿಳಿಸಿದರು. ನಾನು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ತಿಳಿಸಿದರು.