ಪಕ್ಷಾತೀತವಾಗಿ ಸ್ಥಳೀಯ ಮುಖಂಡರಿಂದ ಶುಭಾಶಯ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಅರಸೀಕೆರೆಕರ್ನಾಟಕ ಗೃಹ ಮಂಡಳಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಸರ್ಕಾರದಿಂದ ಶಾಸಕ ಕೆಎಂ ಶಿವಲಿಂಗೇಗೌಡ ನಿಯೋಜನೆ ಆಗಿದ್ದಾರೆ. ಅವರಿಗೆ ಕಾಂಗ್ರೆಸ್ ಸೇರಿದಂತೆ ಪಕ್ಷಾತೀತವಾಗಿ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಶುಭ ಕೋರಿದ್ದಾರೆ.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ಶಾಸಕರಿಗೆ ಸನ್ಮಾನಿಸಿ ಮಾತನಾಡಿ, ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಲಿಂಗೇಗೌಡರು ಈ ಬಾರಿ ಮಂತ್ರಿಯಾಗುತ್ತಾರೆ ಎಂಬ ಆಶಯ ಸ್ಥಳೀಯ ಕಾಂಗ್ರೆಸ್ ಮುಖಂಡರದ್ದು ಮಾತ್ರವಲ್ಲದೆ ಕ್ಷೇತ್ರದ ಜನತೆಯ ಆಶಯವಾಗಿತ್ತು. ಆದರೆ ಪಕ್ಷದ ವರಿಷ್ಠರ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ಶಾಸಕರು ಸಚಿವರಾಗೋದರಲ್ಲಿ ಸಂದೇಹವಿಲ್ಲ. ಅಲ್ಲಿಯವರೆಗೂ ಪಕ್ಷದ ಸಂಘಟನೆ ದೃಷ್ಟಿಯಿಂದ ಶಿವಲಿಂಗೇಗೌಡರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದ್ದು ಇದರಿಂದ ಮುಂದಿನ ಲೋಕಸಭಾ ಚುನಾವಣೆಯ ಸಂಘಟನಾ ದೃಷ್ಟಿಯಿಂದ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಮ್ಮ ಬೆಂಬಲಿಗರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವರಿಷ್ಠರು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿದ್ದು ಅವರೆಲ್ಲರ ಆಶಯಕ್ಕೆ ತಕ್ಕಂತೆ ರಾಜ್ಯದ ವಸತಿ ರಹಿತ ಬಡ ಹಾಗೂ ನಿರ್ಗತಿಕರಿಗೆ ಸೂರು ಕಲ್ಪಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಗ್ರೋ ಬಾಬು, ಮುಖಂಡರಾದ ಎಚ್ ಕೆ ಮಹೇಶ್, ಶಿವೇಗೌಡ, ಕಡಾ ಕಡಿ ಪೀರ್ ಸಾಬ್, ಪ್ರಸನ್ನ, ಆದಿಹಳ್ಳಿ ಜಯರಾಂ ಉಪಸ್ಥಿತರಿದ್ದರು.ಕರ್ನಾಟಕ ಗೃಹ ಮಂಡಳಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಶಾಸಕ ಕೆಎಂ ಶಿವಲಿಂಗೇಗೌಡರಿಗೆ ಸ್ಥಳೀಯ ಮುಖಂಡರಿಂದ ಅಭಿನಂದನೆ ಸಲ್ಲಿಸಲಾಯಿತು.