ಕನ್ನಡಪ್ರಭ ವಾರ್ತೆ ಬೇಲೂರು ಚುನಾವಣಾ ಪೂರ್ವ ಓಡಾಟದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಾಗ ಈಡೇರಿಸುವ ಭರವಸೆಯನ್ನು ನೀಡಿದ್ದು ಅದರಂತೆ ತಮ್ಮ ಸರ್ಕಾರ ಇಲ್ಲದಿದ್ದರೂ ಕೈಲಾದಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಾಗುತ್ತಿರುವದಾಗಿ ಶಾಸಕ ಎಚ್.ಕೆ.ಸುರೇಶ್ ಹೇಳಿದರು. ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದಲ್ಲಿ ಸೋಮವಾರ ಕೆರೆ ಏರಿ ಕಾಲುವೆ ದುರಸ್ಥಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ಒಂದುವರೆ ವರ್ಷದ ಹಿಂದೆ ಈ ಗ್ರಾಮಕ್ಕೆ ಬಂದಾಗ ಮಳೆ ಹೆಚ್ಚಾಗಿ ಕೆರೆ ತುಂಬಿ ಏರಿ ಮೇಲೆ ನೀರು ಹರಿದು ಏರಿ ಬಿರುಕು ಬಿಡುವಂತಾಗಿತ್ತು. ನಾಲೆಯಲ್ಲಿ ನೀರು ತುಂಬಿ ಜಲಾವೃತಗೊಂಡಿತ್ತು. ಅದನ್ನು ವೀಕ್ಷಣೆ ಮಾಡಿ ಆದಷ್ಟು ಬೇಗ ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಿ ಕೊಡುವುದಾಗಿ ಮಾತು ನೀಡಿ ತೆರಳಿದ್ದೆ. ಅದರಂತೆ ಇಂದು ಈ ಕೆರೆ ಏರಿ ಅಬಿವೃದ್ಧಿ ಹಾಗೂ ೧೨೦ ಮೀಟರ್ ನಾಲೆ ಕಾಂಕ್ರೀಟ್ಕರಣಕ್ಕೆ ಭೂಮಿಪೂಜೆ ಮಾಡಿದ್ದೇನೆ. ಮತ್ತು ಶಾಶ್ವತವಾಗಿ ಉಳಿಯುವಂತ ಗುಣಮಟ್ಟದಲ್ಲಿ ಕೆಲಸ ಮಾಡಲು ಗುತ್ತಿಗೆದಾರರಿಗೆ ತಿಳಿಸಿರುವುದಾಗಿ ಹೇಳಿದರು.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಜಯಮ್ಮ, ಸದಸ್ಯ ಉದಯ್ ಕುಮಾರ್, ಮಾಜಿ ಸದಸ್ಯ ಹರೀಶ್ ಗುತ್ತಿಗೆದಾರ ಗೋಪಾಲ್, ವಾಟೆಹೋಳೆ ಅಣೇಕಟ್ಟು ಸಹಾಯಕ ಎಂಜಿನಿಯರ್ ಸಂದೀಪ್, ಗ್ರಾಮಸ್ಥರಾದ ಮಲ್ಲೇಶ್, ಕಿರಣ್, ಚಂದನ್, ಭಾರತಿ ಚಂದ್ರು, ತೀರ್ಥ ಭೊಜೇಶ್, ಬಸವರಾಜ್ ಇನ್ನಿತರರು ಇದ್ದರು.