ರಾಜಕೀಯ ಸಂಸ್ಕೃತಿ ಬದಲಾಯಿಸಿದ ಮೋದಿ

KannadaprabhaNewsNetwork |  
Published : Mar 06, 2024, 02:21 AM IST
ಬೆಳಗಾವಿಯಲ್ಲಿ ನಡೆದ ಪ್ರಬುದ್ಧರ ನಡುವೆ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿದರು | Kannada Prabha

ಸಾರಾಂಶ

ಈ ಹಿಂದೆ ರಾಜಕಾರಣ ನೋಡಿದರೆ ಭ್ರಷ್ಟಾಚಾರ, ದುರಾಡಳಿತ, ಜಾತಿ ರಾಜಕಾರಣ ತುಂಬಿತ್ತು. ರಾಜಕಾರಣದ ಈ ಸ್ಥಿತಿ ಎಂದೂ ಬದಲಾಗದು ಎಂಬ ಸ್ಥಿತಿ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ನೀತಿ, ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ಹಿಂದೆ ರಾಜಕಾರಣ ನೋಡಿದರೆ ಭ್ರಷ್ಟಾಚಾರ, ದುರಾಡಳಿತ, ಜಾತಿ ರಾಜಕಾರಣ ತುಂಬಿತ್ತು. ರಾಜಕಾರಣದ ಈ ಸ್ಥಿತಿ ಎಂದೂ ಬದಲಾಗದು ಎಂಬ ಸ್ಥಿತಿ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ನೀತಿ, ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆ.ಎನ್‌.ಮೆಡಿಕಲ್‌ ಕಾಲೇಜು ಜೀರಗೆ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಬುದ್ಧರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಗಳಲ್ಲಿ ಬಹುಮತದೊಂದಿಗೆ ಗೆದ್ದ ಪಾರ್ಟಿಗಳು ಬಳಿಕ ಆ ಸರ್ಕಾರ ಒಂದು ಜಾತಿಗೆ ಸೀಮಿತವಾಗುತ್ತಿತ್ತು. ಇಂತಹ ಆಡಳಿತ ಎಂದಿಗೂ ಇಡೀ ಸಮಾಜ ಪ್ರತಿನಿಧಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ಸಂಸ್ಕೃತಿ ಬದಲಾಯಿಸಿದರು. ಜಾತಿ ರಾಜಕಾರಣಕ್ಕೆ ತಡೆಹಾಕಿದರು. ಎಲ್ಲರಿಗೂ ನ್ಯಾಯಕೊಟ್ಟರು. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಮಂತ್ರದೊಂದಿಗೆ ಅಭಿವೃದ್ಧಿ ಸಂಕಲ್ಪ ಮಾಡಿದರು ಎಂದರು.

ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ. ಆದರೆ, ಭಾರತೀಯ ಜನತಾ ಪಾರ್ಟಿ ಕೆಡರ್‌ ಬೇಸ್‌ ಪಾರ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪ್ರಜಾಪ್ರಭುತ್ವ ಪಕ್ಷ ನಮ್ಮದಾಗಿದೆ ಎಂದು ಹೇಳಿದರು.

ಕದ್ದು, ಮುಚ್ಚಿ ಲಸಿಕೆ ಪಡೆದರು:

ಕೊರೋನಾ ನಿಯಂತ್ರಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಆದರೆ, ಮೋದಿ ಕೊರೋನಾ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮೋದಿ ಜೊತೆಗೆ ದೇಶದ ಜನತೆ ತಟ್ಟೆ ಬಾರಿಸಿದರು. ದೀಪ ಬೆಳಗಿಸಿದರು. ಕರ್ಫ್ಯೂ, ಜನತಾ ಕರ್ಫ್ಯೂ, ಲಾಕ್‌ಡೌನ್‌ ಮಾಡುವ ಮೂಲಕ ಕೊರೋನಾ ಜೊತೆಗೆ ಹೋರಾಡಿದರು. ದೇಶಕ್ಕೆ ಅಷ್ಟೇ ಅಲ್ಲದೇ, ಕೊರೋನಾ ಲಸಿಕೆಗಳನ್ನು ಬೇರೆ ದೇಶಕ್ಕೂ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆ ವೇಳೆ ಗಾಂಧಿ ಕುಟುಂಬದವರು ಕೊರೋನಾ ಲಸಿಕೆ ಪಡೆಯಬಾರದೆಂದು ಜನತೆಗೆ ಹೇಳಿ, ತಾವೇ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡರು ಎಂದರು.

ಖರ್ಗೆ ಸುಮ್ಮನಿದ್ದೀರಿ ಏಕೆ?:

ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಪಾಕ್‌ ಪರ ಘೋಷಣೆ ಕೂಗಿದರು. ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಈ ಭೂಮಿ ಪುತ್ರ ನೀವು. ಈ ವಿಚಾರದಲ್ಲಿ ನಿವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದ ನಡ್ಡಾ, ಭಾರತ ಜೋಡೋ ಪಾದಯಾತ್ರೆ ಮಾಡುತ್ತಿದ್ದೀರಲ್ಲ. ಭಾರತ ಒಡೆಯುವವರು ನಿಮ್ಮ ಮನೆಯಲ್ಲೇ ಕುಳಿತಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಲಾಗಿದೆ. ಕಾಂಗ್ರೆಸ್‌ನವರಿಗೆ ಮತಗಳು ಬೇಕಿವೆ. ಅವರಿಗೆ ನಿಜವಾಗಿಯೂ ದೇಶಭಕ್ತಿ ಇಲ್ಲ. ಅವರದ್ದು ಕುಟುಂಬ ಭಕ್ತಿ ಎಂದು ವ್ಯಂಗ್ಯವಾಡಿದರು.

ಫಾರೂಕ್‌ ಅಬ್ದುಲ್ಲಾ, ಅಖಿಲೇಶ ಯಾದವ, ಲಾಲು ಪ್ರಸಾದ ಯಾದವ, ರಾಬ್ಡಿ ದೇವಿ, ಗಾಂಧಿ ಕುಟುಂಬ ಹೀಗೆ ಪ್ರತಿಪಕ್ಷಗಳು ಕುಟುಂಬ ಪಾರ್ಟಿಗಳಾಗಿವೆ. ಅವರು ನಮ್ಮ ಕುಟುಂಬ ಉಳಿಯಲಿ, ಭ್ರಷ್ಟಾಚಾರ ಹೆಚ್ಚಲಿ ಎನ್ನುತ್ತಿದ್ದಾರೆ. ಕೇಜ್ರಿವಾಲ್‌, ಸಂಜಯ ಸಿಂಗ್‌ ಸೇರಿದಂತೆ ಪ್ರತಿಪಕ್ಷಗಳ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ. ಕೆಲವರು ಜಾಮೀನಿನ ಮೇಲಿದ್ದರೆ, ಕೆಲವರು ಜೈಲಿನಲ್ಲಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಗಾಂಧಿ ಕುಟುಂಬ ತಿವಿದ ನಡ್ಡಾ:

ಇಡೀ ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ 2028ರಲ್ಲಿ ನಾವು 3ನೇ ಸ್ಥಾನಕ್ಕೆ ಬರುತ್ತೇವೆ. ಗಾಂಧಿ ಕುಟುಂಬ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದೆ. ಆ ಕುಟುಂಬವೇ ಈಗ ನಿರುದ್ಯೋಗಿಯಾಗಿದೆ. ಜಗತ್ತಿನಲ್ಲಿ ಭಾರತದ ಗ್ರೋಥ್‌ರೇಟ್‌ ಶೇ.6.3 ಇದೆ. ಇದನ್ನು ನಾವು ಅನಕ್ಷರಸ್ಥರಿಗೆ ತಿಳಿಸಬೇಕೇ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸ್ಟಾಕ್‌ ಮಾರ್ಕೆಟ್‌ನಲ್ಲಿ ನಾವು ಬಲಾಢ್ಯರಾಗಿದ್ದೇವೆ. ಭಾರತ ಮುಂಚೂಣಿಯಲ್ಲಿದೆ. ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕನಸಿನೊಂದಿಗೆ ಹೋಗುತ್ತಿದ್ದೇವೆ. ವಿಕಸಿತ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, 2004-14ರವರೆಗೆ ಯುಪಿಎ ಸರ್ಕಾರ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂದರೆ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಭಾರತಕ್ಕೆ ಭವಿಷ್ಯವೇ ಇಲ್ಲ. ಅಭಿವೃದ್ಧಿ ಸಾಧ್ಯವೇ ಇಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೋಡಲು ಸಾಧ್ಯ ಇಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ದೇಶಕ್ಕೆ ಉತ್ತಮ ಭವಿಷ್ಯವಿದೆ. ಉತ್ತಮ ಆಡಳಿತ ಕೊಡಲು ಸಾಧ್ಯ ಇದೆ ಎಂದು ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ಇಲ್ಲದೇ ಪ್ರಧಾನಿ ಮೋದಿ ಆಡಳಿತ ನೀಡುತ್ತಿದ್ದಾರೆ. ಮೋದಿ ಆಡಳಿತ ವೈಖರಿ ಹೇಗಿದೆ ಎಂದರೆ ವಿಶ್ವದಲ್ಲಿ ಭಾರತ ಐದನೇ ಆರ್ಥಿಕ ದೇಶವಾಗಿದೆ ಎಂದರು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೆಎಲ್‌ಇ ಕಾರ್ಯಾಧ್ಯಕ್ಷ ಸದಸ್ಯ ಡಾ.ಪ್ರಭಾಕರ ಕೋರೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ಉಪಸ್ಥಿತರಿದ್ದರು. ಎಂ.ಬಿ.ಜಿರಲಿ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!