ನಗರದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟಕ್ನಿಷಿಯನ್ ಸಿಬ್ಬಂದಿಯೊಬ್ಬರ ಮೊಬೈಲ್ ಕಸಿದುಕೊಂಡ ಮಂಗವೊಂದು ಮರವೇರಿ ಕುಳಿತ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೊಬೈಲ್ ಮರಳಿ ಪಡೆಯಲು ಹರಸಾಹಸ । ಕಪಿಚೇಷ್ಟೆಗೆ ಸೇರಿದ ಜನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟಕ್ನಿಷಿಯನ್ ಸಿಬ್ಬಂದಿಯೊಬ್ಬರ ಮೊಬೈಲ್ ಕಸಿದುಕೊಂಡ ಮಂಗವೊಂದು ಮರವೇರಿ ಕುಳಿತ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ಮಾಡುತ್ತಿರುವ ಯುವತಿ ತನ್ನ ಮೊಬೈಲ್ನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ಮಂಗ ಕಿಟಕಿಯ ಪಕ್ಕದಲ್ಲಿ ಇಟ್ಟಿದ್ದ ಮೊಬೈಲನ್ನು ತೆಗೆದುಕೊಂಡು ಆಸ್ಪತ್ರೆಯ ಪಕ್ಕದಲ್ಲಿದ್ದ ದೊಡ್ಡ ಮರದ ತುದಿಗೆ ಹೋಗಿ ಕುಳಿತಿದೆ.
ಮೊಬೈಲ್ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಆಗಾಗ ಮೊಬೈಲನ್ನು ಎದೆಗೆ ಅವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪರದೆ ನೋಡುತ್ತ ಪರದೆ ಮೇಲೆ ಬೆರಳು ಆಡಿಸುತ್ತ, ಮೊಬೈಲ್ ಕಿವಿಗೆ ಹಿಡಿದು ಕುಳಿತಿತ್ತು.
ಆಗ ಅಲ್ಲಿದ್ದ ಜನರು ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್ ಪಡೆಯುವ ಪ್ರಯತ್ನವನ್ನು ಮಾಡಿದರೂ ಸಹ ಮಂಗ ಮೊಬೈಲ್ನ್ನು ಗಟ್ಟಿಯಾಗಿಯೇ ಹಿಡಿದು ಕುಳಿತಿತ್ತು. ಮಂಗನಿಂದ ಮೊಬೈಲ್ ಪಡೆಯಲು ಸುಮಾರು 1 ಗಂಟೆ ಕಾಲ ನಾನಾ ಪ್ರಯತ್ನ ನಡೆಯಿತು. ಆದರೆ, ಮಂಗ ಮಾತ್ರ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತ ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಅದನ್ನು ನೋಡಲು ರಸ್ತೆಯಲ್ಲಿ ಹಲವಾರು ಜನ ಸೇರಿದ್ದರು. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಸಹ ಆಯಿತು. ಅದು ಸಹ ಭಯದಿಂದ ಕೆಳಗೆ ಬರಲೇ ಇಲ್ಲ. ಕೊನೆಗೆ ಮಂಗ ಬಾಳೆಹಣ್ಣನ್ನು ನೋಡಿ ಆಸ್ಪತ್ರೆಯ ಸ್ಲ್ಯಾಬ್ ಮೇಲೆ ಬಂದಿತು. ಆಗ ಯುವಕರು ಪಟಾಕಿ ಸಿಡಿಸಿದರು. ಇದರಿಂದ ಭಯಗೊಂಡ ಮಂಗ ಮೊಬೈಲ್ನ್ನು ಕೈಬಿಟ್ಟು ಬಾಳೆಹಣ್ಣು ತೆಗೆದುಕೊಂಡು ಹೋಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.