ಚಿಕ್ಕಮಗಳೂರುಮಲೆನಾಡಿನ ಹೆಬ್ಬಾಗಿಲು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಈ ವರ್ಷದ ಮುಂಗಾರು ಪ್ರವೇಶಿಸಿದ್ದು, ಚಿಕ್ಕಮಗಳೂರು ನಗರ, ಕಡೂರು, ಬೀರೂರು ಸೇರಿದಂತೆ ಮೊದಲಾದ ತಾಲೂಕುಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ತುಂತುರು ಮಳೆ, ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು.
ಇನ್ನೂ ಒಂದು ವಾರ ಭಾರೀ ಮಳೆ: ಯೆಲ್ಲೋ ಅಲರ್ಟ್ನ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಲೆನಾಡಿನ ಹೆಬ್ಬಾಗಿಲು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಈ ವರ್ಷದ ಮುಂಗಾರು ಪ್ರವೇಶಿಸಿದ್ದು, ಚಿಕ್ಕಮಗಳೂರು ನಗರ, ಕಡೂರು, ಬೀರೂರು ಸೇರಿದಂತೆ ಮೊದಲಾದ ತಾಲೂಕುಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ತುಂತುರು ಮಳೆ, ಮೋಡಕವಿದ ವಾತಾವರಣ ಸೃಷ್ಟಿಯಾಗಿತ್ತು.ಜೂನ್ 4 ರಂದು ಕೇರಳ ಪ್ರವೇಶಿಸಿದ್ದ ಪ್ರಸಕ್ತ ವರ್ಷದ ಮುಂಗಾರು ಶುಕ್ರವಾರ ರಾಜ್ಯದ ವಿವಿಧ ಭಾಗಕ್ಕೆ ಪ್ರವೇಶಿಸಿದೆ. ಶನಿವಾರ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸಿರುವ ಮುಂಗಾರು, ಬೆಳಗ್ಗೆಯಿಂದಲೇ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದಿದೆ.ಶೀತ ಗಾಳಿ ಕಾರಣಕ್ಕೆ ಜನಸಾಮಾನ್ಯರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಯೊಂದಿಗೆ ಮೋಡ ಕವಿದ ವಾತಾವರಣ ಇದ್ದ ಕಾರಣಕ್ಕೆ ಸೂರ್ಯ ಇಡೀ ದಿನ ಮೋಡಗಳ ಮರೆಯಲ್ಲಿಯೇ ಕಾಲ ಕಳೆಯಬೇಕಾಯಿತು.
ಇನ್ನೂ ಒಂದು ವಾರ ಭಾರೀ ಮಳೆ
ಚಿಕ್ಕಮಗಳೂರಿನ ಜಿಲ್ಲೆಯಾದ್ಯಂತ ಇನ್ನೂ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರಕ್ಕೆ ಆರೆಂಜ್ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಜೂನ್ 13ರ ವರೆಗೆ ಜಿಲ್ಲೆಗೆ ಯೆಲ್ಲೋ ಅಲರ್ಟ್ನ ಎಚ್ಚರಿಕೆ ನೀಡಲಾಗಿದೆ.
ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿಯೂ ಬೀಸುವ ಸಾಧ್ಯತೆ ಇದೆ. ಭಾನುವಾರ ಸುಮಾರು 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸೋಮವಾರದ ಬಳಿಕ ಗಾಳಿ ವೇಗ 40 ರಿಂದ 30 ಕಿ,ಮೀಗೆ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಏಳು ದಿನದಲ್ಲಿ ಉತ್ತಮ ಮಳೆ
ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಪ್ರಮಾಣ ಪರಿಶೀಲಿಸಿದರೆ ಅಜ್ಜಂಪುರ ತಾಲೂಕು ಹೊರತು ಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 40 ಮಿ.ಮೀ ವಾಡಿಕೆ ಮಳೆಯಾಗಿದೆ. ಆದರೆ, 53 ಮಿ.ಮೀ ಮಳೆಯಾಗುವ ಮೂಲಕ ಶೇ.33 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಕೆಎಸ್ಎನ್ಡಿಎಂಸಿ ಮಾಹಿತಿ ನೀಡಿದೆ.
- ಬಾಕ್ಸ್-
ಗರಿಗೆದರಿದ ಕೃಷಿ ಚಟುವಟಿಕೆ
ಮುಂಗಾರು ಶನಿವಾರ ಪ್ರವೇಶಿಸಿದರೂ ಕಳೆದ ಒಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಉತ್ತಮ ಮಳೆ ಸುರಿಯುತ್ತಿದೆ. ಹೀಗಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಕೃಷಿ ಚಟುವಟಿಕೆ ಸಹ ಗರಿಗೆದರಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಮೊದಲಾದ ತಯಾರಿ ಆರಂಭಿ ಸಿರುವುದು ಕಂಡು ಬರುತ್ತಿದೆ.
- ಕೋಟ್-
ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳನ್ನು ಪ್ರವೇಶಿಸಿದೆ. ಮಳೆಯ ತೀವ್ರತೆ ಇನ್ನೂ ಹೆಚ್ಚಾಗಿರಬೇಕಾಗಿತ್ತು. ಆದರೆ, ತೀವ್ರತೆ ಕಡಿಮೆ ಕಂಡು ಬರುತ್ತಿದೆ. ಇನ್ನೂ ಒಂದು ವಾರ ಮಳೆ ಮುಂದುವರಿಯಲಿದೆ.
- ಶ್ರೀನಿವಾಸ್ ರೆಡ್ಡಿ, ಹವಾಮಾನ ತಜ್ಜರು, ಬೆಂಗಳೂರು- ಕೋಟ್-
ಮುಂಗಾರು ಆರಂಭವಾಗಿರುವುದು ಸಂತಸದ ಸಂಗತಿ. ಕೃಷಿ ಚಟುವಟಿಕೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಸದ್ಯ ದ್ವಿದಳ ದಾನ್ಯಗಳ ಬಿತ್ತನೆ ಆಗುತ್ತಿದೆ. ಅಗತ್ಯವಿರುವ ಬೀಜ, ಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಜೂನ್ 15ರ ನಂತರ ಮುಸುಕಿನ ಜೋಳ ಸೇರಿದಂತೆ ಬೇರೆ ಬೇರೆ ಬಿತ್ತನೆ ಕಾರ್ಯ ರೈತರು ಮಾಡಲಿದ್ದಾರೆ. ಎಲ್ಲ ವ್ಯವಸ್ಥೆ ಮಾಡಲಾಗಿದೆ.
ತಿರುಮಲೇಶ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಚಿಕ್ಕಮಗಳೂರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.