ಮುಂಗಾರು ವೈಫಲ್ಯ: ಹಬ್ಬಗಳಿಗೆ ಬರಗಾಲದ ಬಿಸಿ

KannadaprabhaNewsNetwork |  
Published : Aug 14, 2026, 02:00 AM IST
ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ಶ್ರಾವಣಮಾಸದ ಪೂಜಾ ಕೈಂಕರ್ಯದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದರು.  | Kannada Prabha

ಸಾರಾಂಶ

ಮಳೆ ಕೈಕೊಟ್ಟ ಪರಿಣಾಮ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತಷ್ಟು ಕುಗ್ಗಿ ಹೋಗಿದ್ದು ಹಬ್ಬದ ಖರೀದಿಗೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಆಷಾಢ ಕಳೆಯಿತು. ಶ್ರಾವಣ ಶುರುವಾಗಿದೆ. ಇನ್ನು ಸಾಲು ಸಾಲು ಹಬ್ಬಗಳದ್ದೇ ಸದ್ದು. ನಾಗರ ಪಂಚಮಿಯಿಂದ ಆರಂಭವಾಗುವ ಹಬ್ಬಗಳ ಸಂಭ್ರಮ ಗಣೇಶ ಚತುರ್ಥಿ, ಗೌರಿ ಹಬ್ಬ, ದಸರಾ, ದೀಪಾವಳಿಯವರೆಗೆ ಮುಂದುವರಿಯಲಿದೆ. ಆದರೆ, ಈ ಬಾರಿ ಹಬ್ಬಗಳ ಆಗಮನದೊಂದಿಗೆ ರೈತಾಪಿ ವಲಯದ ಮನೆ-ಮನಗಳಲ್ಲಿ ಸಂಭ್ರಮಕ್ಕಿಂತ ಮುಂಗಾರು ವೈಫಲ್ಯದ ಆತಂಕವೇ ಹೆಚ್ಚಾಗಿದೆ. ಮಳೆ ಕೈಕೊಟ್ಟ ಪರಿಣಾಮ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಆರ್ಥಿಕ ಸ್ಥಿತಿ ಮತ್ತಷ್ಟು ಕುಗ್ಗಿ ಹೋಗಿದ್ದು ಹಬ್ಬದ ಖರೀದಿಗೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಬ್ಬದ ಸಡಗರ ಕಸಿದ ಬರ: ಕಳೆದ ಮೂರು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಕೈಗೆ ಸಿಗದೆ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈ ಬಾರಿಯ ಮುಂಗಾರು ಮತ್ತೊಂದು ಆಘಾತ ನೀಡಿದೆ. ಜೂನ್‌-ಜುಲೈನಲ್ಲಿ ಉತ್ತಮ ಮಳೆಯಾಗಿ ಜಮೀನುಗಳಲ್ಲಿ ಹಸಿರು ಹೊದಿಕೆ ಮೂಡಬೇಕಿತ್ತು. ಹೊಲಗಳಲ್ಲಿ ಭತ್ತ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ನಳನಳಿಸಬೇಕಿತ್ತು.

ಕೃಷಿ ಚಟುವಟಿಕೆ ಚುರುಕುಗೊಂಡು ರೈತರ ಕೈಗೆ ಹಣ ಹರಿದುಬಂದು, ಶ್ರಾವಣದ ಹಬ್ಬಗಳಿಗೆ ಹೊಸ ಬಟ್ಟೆ, ಪೂಜಾ ಸಾಮಗ್ರಿ, ಸಿಹಿ-ತಿನಿಸು ಖರೀದಿಸುವ ನಿರೀಕ್ಷೆಯಿತ್ತು. ಆದರೆ, ಮಳೆಯ ಕೊರತೆಯಿಂದ ಈ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಮಲೆನಾಡು ಭಾಗದಲ್ಲಿಯೇ ಮಳೆಯ ಕೊರತೆ ಕಂಡುಬಂದಿರುವುದು ಜಿಲ್ಲೆಯ ಕೃಷಿಗೆ ದೊಡ್ಡ ಹೊಡೆತ ನೀಡಿದೆ. ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಆಗದೆ ನೀರಿನ ಮಟ್ಟ ಆತಂಕಕಾರಿ ಸ್ಥಿತಿಗೆ ತಲುಪಿತ್ತು. ಈಚೆಗೆ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವುದು ಒಂದಷ್ಟು ಆಶಾಭಾವ ಮೂಡಿಸಿದೆಯಾದರೂ, ಕಾಲುವೆಗಳಿಗೆ ನೀರು ಹರಿಸುವಷ್ಟರಲ್ಲಿ ಮುಂಗಾರು ಹಂಗಾಮಿನ ಬಹುಮುಖ್ಯ ಅವಧಿ ಕಳೆದುಹೋಗುವ ಸಾಧ್ಯತೆ ಇದೆ. ಹೀಗಾಗಿ, ಈಗ ದೊರೆಯುವ ನೀರು ಎಷ್ಟರ ಮಟ್ಟಿಗೆ ಬೆಳೆಗಳನ್ನು ಉಳಿಸಲಿದೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಬೆಳೆ ಕೈಕೊಟ್ಟರೆ ಸಾಲದ ಹೊರೆ: ಜಿಲ್ಲೆಯ ರೈತರು ಭತ್ತ, ಮೆಣಸಿನಕಾಯಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಈ ಬೆಳೆಗಳಿಗೆ ನೀರಿನ ಲಭ್ಯತೆ ಅತ್ಯಂತ ಮುಖ್ಯ. ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಹಲವು ಕಡೆ ರೈತರು ಮುಂದಿನ ಬೆಳವಣಿಗೆಯ ಬಗ್ಗೆ ಆತಂಕಗೊಂಡಿದ್ದಾರೆ. ಬಿತ್ತನೆ, ಗೊಬ್ಬರ, ಕೀಟನಾಶಕ, ಕೂಲಿ ಸೇರಿದಂತೆ ಈಗಾಗಲೇ ಮಾಡಿರುವ ಖರ್ಚು ಮರಳುವ ಭರವಸೆಯೂ ಇಲ್ಲದಂತಾಗಿದೆ. ಬೆಳೆ ಕೈಕೊಟ್ಟರೆ ಸಾಲದ ಹೊರೆ ಮತ್ತಷ್ಟು ಹೆಚ್ಚಲಿದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಕೃಷಿ ಆದಾಯ ಕುಸಿದಿರುವ ಪರಿಣಾಮ ಅದರ ನೇರ ಹೊಡೆತ ಗ್ರಾಮೀಣ ಆರ್ಥಿಕತೆಯ ಮೇಲೂ ಬಿದ್ದಿದೆ. ರೈತರ ಕೈಗೆ ಹಣ ಬಾರದಿದ್ದರೆ ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಬಟ್ಟೆ ಅಂಗಡಿಗಳು, ಹಬ್ಬದ ಸಾಮಗ್ರಿ ಮಾರಾಟಗಾರರು ಸೇರಿದಂತೆ ಅನೇಕ ವಲಯಗಳ ವಹಿವಾಟು ಕುಗ್ಗುತ್ತದೆ. ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡುಬರುವ ಖರೀದಿ ಉತ್ಸಾಹ ಈ ಬಾರಿ ಕಾಣಿಸಿಕೊಳ್ಳುತ್ತಿಲ್ಲ.

ಬೆಲೆ ಏರಿಕೆ ಬಿಸಿ: ಏತನ್ಮಧ್ಯೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ದಿನಬಳಕೆಯ ಸಾಮಗ್ರಿಗಳು, ತರಕಾರಿ, ಆಹಾರ ಧಾನ್ಯಗಳು, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬದ ಮಾಸಿಕ ಬಜೆಟ್‌ ಏರುಪೇರಾಗಿದೆ. ಈಗಾಗಲೇ ಕೃಷಿ ಚಟುವಟಿಕೆಗೆ ಸಾಲ ಮಾಡಿಕೊಂಡಿರುವ ರೈತರು ಹಬ್ಬಕ್ಕೆ ಮತ್ತೆ ಸಾಲ ಮಾಡುವ ಸ್ಥಿತಿಯಲ್ಲಿಲ್ಲ. ಇದು ಹಬ್ಬದ ಸಡಗರ ಸಂಭ್ರಮಕ್ಕೂ ತಣ್ಣೀರೆರಚಿದಂತಾಗಿದೆ.

ಹಬ್ಬಗಳು ಬಂದರೆ ಹೊಸ ಬಟ್ಟೆ, ಸಿಹಿ, ಹಣ್ಣು, ಪೂಜಾ ಸಾಮಗ್ರಿ ಖರೀದಿಸುವುದು ಗ್ರಾಮೀಣ ಬದುಕಿನ ಸಹಜ ಸಂಪ್ರದಾಯ. ಆದರೆ, ಈ ಬಾರಿ ಕೈಯಲ್ಲಿ ಹಣವಿಲ್ಲದ ಕಾರಣ ರೈತ ಕುಟುಂಬಗಳು ಸಣ್ಣಪುಟ್ಟ ಖರ್ಚಿಗೂ ಲೆಕ್ಕ ಹಾಕುವಂತಾಗಿದೆ. ಎಷ್ಟೇ ಬರ ಇದ್ದರೂ ಪ್ರಮುಖ ಹಬ್ಬಗಳಲ್ಲಿ ತೊಡಗಿಸಿಕೊಳ್ಳಲೇಬೇಕು. ಆದರೆ, ಈ ಬಾರಿ ಅತ್ಯಂತ ಸರಳವಾಗಿ ಹಬ್ಬ ಆಚರಿಸುವುದು ಅನಿವಾರ್ಯವಾಗಿದೆ ಎಂದು ಎನ್ನುತ್ತಾರೆ ರೈತರು ಹಾಗೂ ಕೃಷಿ ಕಾರ್ಮಿಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆ
(ವೆಬ್ಬಿಗೆ)) ಪಿಂಚಣಿದಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆ