ಗಣೇಶ್ ಕಾಮತ್ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹನುಮಂತ ದೇವಸ್ಥಾನದ ಎದುರಿನ ಲಾವಂತ ಬೆಟ್ಟು ರಸ್ತೆಯ ಆರಂಭ, ಕೊನೆ, ದೊಡ್ಮನೆ ರಸ್ತೆ, ಪೇಟೆಯ ಹಲವು ಮುಖ್ಯ ಬೀದಿ, ಅಡ್ಡರಸ್ತೆಗಳಿಗೆ ಚರಂಡಿ ಎನ್ನುವುದೇ ಇಲ್ಲ. ಚರಂಡಿ ಇದ್ದ ಕಡೆ ಅವುಗಳ ಹೂಳೆತ್ತುವ ಗೋಜಿಗೆ ಯಾರೂ ಹೋಗಿಲ್ಲ.
ನೀರು ಸರಾಗ ಹರಿವೆಗೆ ಚರಂಡಿಗಳೇ ಇಲ್ಲ: ಹಲವು ವರ್ಷಗಳಿಂದ ರಾಜಕೀಯ ಪಕ್ಷಗಳ ಆಶ್ವಾಸನೆಯ ಪಟ್ಟಿಯಲ್ಲಿರುವ ಒಳಚರಂಡಿ ಯೋಜನೆಯ ಹೆಸರಿನಲ್ಲಿ ಅಲ್ಲಲ್ಲಿ ಗೊತ್ತು ಗುರಿ ಇಲ್ಲದೇ ರಚನೆಯಾದ ಕಾಂಕ್ರೀಟು ಚರಂಡಿಗಳು ಊರವರು ಎಸೆದ ತ್ಯಾಜ್ಯ ಪೊಟ್ಟಣಗಳಿಂದ ತುಂಬಿವೆ.ಹಸಿರನ್ನೇ ಮರೆತು, ಇದ್ದುದನ್ನೆಲ್ಲ ಕ್ರಾಂಕೀಟುಮಯವಾಗಿಸಿರುವ ಪೇಟೆಯಲ್ಲಿ ಚರಂಡಿಗಳನ್ನು ಭೂತಕನ್ನಡಿ ಹಿಡಿದು ಹುಡುಕುವ ಪರಿಸ್ಥಿತಿ ಇದೆ. ಹಾಗಾಗಿ ಈ ಬಾರಿ ಸುರಿವ ಮಳೆ ಅದೇನು ಅಪಾಯಗಳನ್ನು ತಂದೊಡ್ಡಲಿದೆ ಎಂದು ಊಹಿಸುವುದಕ್ಕೂ ಕಷ್ಟವಾಗುತ್ತಿದೆ.
ವಸತಿ, ವಾಣಿಜ್ಯ ಸಂಕೀರ್ಣಗಳವರು ನಿಯಮ ಮೀರಿ ತಮ್ಮ ದುರ್ನಾತವನ್ನು ಹತ್ತಿರದ ಚರಂಡಿಗಳಿಗೆ ದೇಣಿಗೆಯಾಗಿ ನೀಡುತ್ತಿರುವ ಕಾರಣ ಗಲೀಜು ನೀರು ರಸ್ತೆಗೆ ಹರಿದು ಮಳೆಗಾಲದಲ್ಲಿ ಪಾದಚಾರಿಗಳಿಗೆ ರಟ್ಟುವುದು ಎಂದಿನ ನರಕಯಾತನೆ ಕೇಳುವವರಿಲ್ಲದಂತಾಗಿದೆ. ಈಗಾಗಲೇ ಕೆಲವು ಚರಂಡಿಗಳ ಗಬ್ಬು ನಾತ ಪೇಟೆಯಲ್ಲಿ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.ಜನಪ್ರತಿನಿಧಿಗಳಿಲ್ಲದೇ ವರ್ಷ ಕಳೆದ ಪುರಸಭೆಯಲ್ಲಿ ಅಧಿಕಾರಿಗಳು ತಮ್ಮ ಇತಿ ಮಿತಿಯಲ್ಲಿ ಸ್ಪಂದಿಸಿದ್ದಾರೆ. ಆದರೆ ಸಮಗ್ರ ದೂರದರ್ಶಿತ್ವದ ಜವಾಬ್ದಾರಿಯಿಂದ ಕೆಲಸ ಮಾಡಿಸಬೇಕಾಗಿರುವ ಜನಪ್ರತಿನಿಧಿಗಳು ಮೌನ ವಹಿಸಿರುವುದು ವ್ಯವಸ್ಥೆಯ ದುರಂತ.
ಪುರಸಭಾ ವ್ಯಾಪ್ತಿಯಲ್ಲಿ ಚರಂಡಿಯ ಹೂಳೆತ್ತುವ ಕೆಲಸ ನಿರಂತರವಾಗಿ ಸಾಗಿದೆ. ಕಲ್ಸಂಕ ರಾಜ ಕಾಲುವೆಯನ್ನು ಶುಚಿಗೊಳಿಸಲಾಗಿದೆ. ಮಳೆಗಾಲವನ್ನೆದುರಿಸಲು ಈಗಾಗಲೇ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ತಂಡಗಳನ್ನು ರಚಿಸಲಾಗಿದೆ. ಸಹಾಯವಾಣಿ 08258236236 ಗೆ ಕರೆ ಮಾಡಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಪರಿಹರಿಸಿಕೊಳ್ಳಬಹುದು. ಮಳೆಗಾಲದ ಸವಾಲುಗಳನ್ನೆದುರಿಸಲು ನಾವು ಸಜ್ಜಾಗಿದ್ದೇವೆ- ಸುಜಯ್ ಎಸ್.ಎಂ., ಪುರಸಭಾ ಮುಖ್ಯಾಧಿಕಾರಿ ಮೂಡುಬಿದಿರೆ