ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ನೆಲ, ಜಲವನ್ನು ಉಳಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಸರ್ಕಾರದ ಆಶಯದಂತೆ ನಾವೆಲ್ಲರೂ ನಾಡುನುಡಿ ಪ್ರೀತಿಯ ಜೊತೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕಾಗಿದೆ ಎಂದು ಮೂಡುಬಿದಿರೆ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ನುಡಿದರು.ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣಗೊಂಡು ೫೦ ವರ್ಷಗಳು ತುಂಬಿದ ಸುವರ್ಣ ಸಂಭ್ರಮದ ಸಂದರ್ಭದ ಸಲುವಾಗಿ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಬಳಿ ಸ್ವಾಗತಿಸಿ ಮಾತಾನಾಡಿದರು. ರಥಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರು, ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷರು ಮತ್ತಿತರ ಆಡಳಿತ ವರ್ಗದವರು ಮಾಲಾರ್ಪಣೆದರು.
ಕಂದಾಯ ನಿರೀಕ್ಷಕರಾದ ಮಂಜುನಾಥ ಹಾಗೂ ಆಡಳಿತ ಸೌಧದ ಅಧಿಕಾರಿಗಳು, ನೌಕರ ವೃಂದ, ಕ್ಷೇತ್ರ ಶಿಕ್ಷಣಾಧಿಕಾರಿ, ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ,. ಕಾರ್ಯದರ್ಶಿ ಸದಾನಂದ ನಾರಾವಿ, ಸಂಘಟನಾ ಕಾರ್ಯದರ್ಶಿ ಯತಿರಾಜ ಶೆಟ್ಟಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಖಾಸಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಶಿಕಾಂತ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.ರಥಯಾತ್ರೆಯನ್ನು ಮೂಡುಬಿದಿರೆ ಗಡಿಭಾಗದ ಮಿಜಾರಿನ ಬಳಿ ಬರಮಾಡಿಕೊಳ್ಳಲಾಯಿತು. ಮಂಗಳೂರು ತಾಲೂಕು ಕ.ಸಾ.ಪ ಅಧ್ಯಕ್ಷ ಮಂಜುನಾಥ ರೇವಣ್ಕರ್, ಸಂಘಟನಾ ಸಹಕಾರ್ಯದರ್ಶಿಗಳಾದ ಸನತ್ ಕುಮಾರ್ ಜೈನ್ ಹಾಗೂ ಅಧಿಕಾರಿ ವರ್ಗದವರು ರಥಯಾತ್ರೆಯ ಮುಂದಿನ ಹೊಣೆಗಾರಿಕೆಯನ್ನು ಮೂಡುಬಿದಿರೆ ಕಂದಾಯ ನಿರೀಕ್ಷಕರಾದ ಮಂಜುನಾಥ ಮತ್ತು ಮೂಡುಬಿದಿರೆ ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ವರ್ಗ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ, ಸಂಚಾಲಕರು ಹಾಜರಿದ್ದು ರಥಯಾತ್ರೆಯನ್ನು ಬರಮಾಡಿಕೊಂಡರು. ಅಲ್ಲಿಂದ ಮೂಡುಬಿದಿರೆ ತಾಲೂಕು ಆಡಳಿತ ಸೌಧದ ತನಕ ಮೂಡುಬಿದಿರೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ನೆಲೆನಿಂತಿದ್ದು ಮಾರನೆಯ ದಿನ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಬೀಳ್ಕೊಡಲಾಯಿತು.