ಹುಬ್ಬಳ್ಳಿ: ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಾವು ಮೇಳವನ್ನು ಆಯೋಜನೆ ಮಾಡುವಂತಾಗಲಿ. ಈ ಮೇಳದ ಕುರಿತ ಹೆಚ್ಚಿನ ಪ್ರಚಾರದ ಅವಶ್ಯಕತೆಯಿದೆ. ಪ್ರತಿವರ್ಷ ನಿರ್ದಿಷ್ಟ ತಿಂಗಳಲ್ಲಿ ಮಾವು ಮೇಳ ಆಯೋಜಿಸಿದಲ್ಲಿ ಜನರಿಗೆ ಮೇಳದ ಕುರಿತು ಮುಂಚಿತವಾಗಿ ತಿಳಿಯಲಿದೆ ಎಂದು ಶಾಸಕ ಮಹೇಳ ಟೆಂಗಿನಕಾಯಿ ಹೇಳಿದರು.
ರೈತರು ಗುಣಮಟ್ಟದ ಮಾವಿನ ಹಣ್ಣು ತಂದಿದ್ದಾರೆ. ರೈತರ ಫಸಲನ್ನು ನೋಡಿ ಸಂತೋಷವಾಯಿತು. ರೈತರಿಗೆ ಬೆಳೆದ ಫಸಲನ್ನು ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಮಾಹಿತಿ ಒದಗಿಸುವುದು ಅವಶ್ಯಕವಾಗಿದೆ. ಇದರಿಂದ ಜಿಲ್ಲೆಯ ಮಾವುಗಳು ಬೇರೆ ಬೇರೆ ದೇಶಗಳಿಗೆ ರಫ್ತಾಗಲು ಸಾಧ್ಯವಾಗುತ್ತವೆ ಎಂದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ದೊಡ್ಡ ದೊಡ್ಡ ಕಟ್ಟಡಗಳು ನಮಗೆ ಆಹಾರ ಒದಗಿಸುವುದಿಲ್ಲ. ಸಸಿಗಳನ್ನು ನೆಡಲು ಜನರು ಮುಂದಾಗಬೇಕಿದೆ. ಭೂಮಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕವಾಗಿದೆ ಎಂದರು.ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಮಾವು ರಾಷ್ಟ್ರೀಯ ಹಣ್ಣು ಆಗಿದೆ. ರೈತರು ವರ್ಷಪೂರ್ತಿ ಶ್ರಮವಹಿಸಿ ಮಾವು ಬೆಳೆಯುತ್ತಾರೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಮೋಸವಾಗುತ್ತಿದೆ. ದೇಶದಲ್ಲಿ ಸಾವಿರಕ್ಕೂ ಅಧಿಕ ಮಾವಿನ ತಳಿಗಳಿವೆ. ಉತ್ತಮ ಬೆಳೆಗೆ ಉತ್ತಮ ಬೆಲೆ ದೊರೆಯಬೇಕು. ಜಿಲ್ಲೆಯ ಮಾವು ಬೇರೆ ದೇಶಗಳಿಗೂ ರಫ್ತಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಮೋಹನ ಹೊಸಮನಿ, ಚನ್ನು ಹೊಸಮನಿ, ನಿವೃತ್ತ ಪ್ರಾಧ್ಯಾಪಕ ಬಿ.ಬಿ.ಪಾಟೀಲ, ಚಿದಾನಂದ ಮನಸೂರ ಸೇರಿದಂತೆ ಖರೀದಿದಾರರು, ರಫ್ತುದಾರರು, ಸಾರ್ವಜನಿಕರು ಪಾಲ್ಗೊಂಡಿದ್ದರು.