ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

7 ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ

KannadaprabhaNewsNetwork | Published : Feb 25, 2024 1:49 AM

ಕಳೆದ ಮೂರು ಹುಣ್ಣಿಮೆಗಳಿಂದ 5 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿ ಏಳು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ.

ಮುನಿರಾಬಾದ್: ಭಾರತ ಹುಣ್ಣಿಮೆ ಪ್ರಯುಕ್ತ ಶನಿವಾರ ಸುಮಾರು 7 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿನ ಪ್ರಸಿದ್ಧ ಶಕ್ತಿ ಕೇಂದ್ರವಾದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು.

ಕಳೆದ ಮೂರು ಹುಣ್ಣಿಮೆಗಳಿಂದ 5 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿ ಏಳು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ. ಹುಣ್ಣಿಮೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಭಕ್ತರು ಬಂದಿರುವುದು ದೇಗುಲದ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಶುಕ್ತವಾರ ತಡರಾತ್ರಿ ಸುಮಾರು 1.5 ಲಕ್ಷ ಭಕ್ತರು ಹುಲಿಗಿ ಗ್ರಾಮಕ್ಕೆ ಆಗಮಿಸಿ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ಕಳೆದರು. ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಅಮ್ಮನವರ ದರ್ಶನ ಮಾಡಲು ಭಕ್ತರು ಪ್ರಾರಂಭಿಸಿದರು.

ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಭಾರತ ಹುಣ್ಣಿಮೆ ಪ್ರಯುಕ್ತ ಎರಡು ಲಕ್ಷ ಭಕ್ತರು ದೇವರ ದರ್ಶನ ಪಡೆದರೆ, ಮಧ್ಯಾಹ್ನ 12 ಗಂಟಗೆ ಹೊತ್ತಿಗೆ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿತ್ತು. ಸಂಜೆ 4 ಗಂಟೆಯ ವೇಳೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ ಐದು ಲಕ್ಷ, ಸಂಜೆ 6:30ರ ಸುಮಾರಿಗೆ ಏಳು ಲಕ್ಷ ದಾಟಿತು. ದೇವಸ್ಥಾನದ 800 ವರ್ಷದ ಹುಣ್ಣಿಮೆ ಇತಿಹಾಸದಲ್ಲಿ ಇಷ್ಟೊಂದು ಭಕ್ತರು ಆಗಮಿಸಿದ್ದು ದಾಖಲೆಯಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ತಿಳಿಸಿದ್ದಾರೆ.

ದೇವಸ್ಥಾನದ ವತಿಯಿಂದ ಅಮ್ಮನವರ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ 12 ನೀರಿನ ಟ್ಯಾಂಕರ್‌ ವ್ಯವಸ್ಥೆ ಮಾಡಲಾಯಿತು.ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆ ಇದ್ದರೂ ಭಕ್ತರು ಅಲ್ಪ ಸ್ವಲ್ಪ ನೀರಿನಲ್ಲಿ ಸ್ನಾನ ಮಾಡಿದರು. ಹುಣ್ಣಿಮೆ ಪ್ರಯುಕ್ತ ಹುಲಿಗೆಮ್ಮ ದೇವಸ್ಥಾನದಲ್ಲಿ ಗುಗ್ಗರಿ ಮುಟ್ಟಿಗೆ ಉತ್ಸವ ಆಯೋಜಿಸಲಾಯಿತು.

ಲಕ್ಷಾಂತರ ಭಕ್ತರು ಒಂದೇ ದಿನ ಬಂದಿದ್ದರಿಂದ ಹುಲಿಗಿ, ಹುಲಿಗಿ ಕ್ರಾಸ್‌ ಸೇರಿದಂತೆ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಪೊಲೀಸರು, ದೇವಾಸ್ಥಾನದ ಆಡಳಿತ ಸುಗಮ ಸಂಚಾರಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಬರುತ್ತಿರುವ ಭಕ್ತರಿಗೆ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವೇ ಆಗಿತ್ತು. ಭಾರೀ ಪ್ರಮಾಣದಲ್ಲಿ ವಾಹನ ಬಂದಿದ್ದರಿಂದ ತೊಂದರೆಯಾಯಿತು. ಪದೇ ಪದೇ ಹುಲಗಿ ಬಳಿ ರೇಲ್ವೆ ಕ್ರಾಸ್‌ನಲ್ಲಿ ಗೇಟ್‌ ಹಾಕುತ್ತಿರುವುದರಿಂದಲೂ ಜನರು ತೊಂದರೆಗೆ ಒಳಗಾದರು.ಪ್ರಧಾನಿಯಿಂದ ಹುಲಿಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ನಾಳೆ ಶಂಕು: ಹುಲಿಗೆಮ್ಮ ಭಕ್ತರು ಹಾಗೂ ಗ್ರಾಮಸ್ಥರ ಬಹುದಿನಗಳಿಂದ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಹಾಗೂ ಹುಲಿಗೆಮ್ಮ ಭಕ್ತರ ಅನುಕೂಲಕ್ಕೆ ಮುನಿರಾಬಾದ್ ರೈಲ್ವೆ ನಿಲ್ದಾಣ ಆಧುನೀಕರಣಕ್ಕೆ ಕೆಂದ್ರ ಸರ್ಕಾರವು ಮಂಜೂರಾತಿ ನೀಡಿದೆ. ಫೆ.26ರಂದು ಮಧ್ಯಾಹ್ನ 12.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಈ ಕಾಮಗಾರಿಗಳಿಗೆ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರೈಲ್ವೆ ಇಲಾಖೆಯ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.