- ಹಿರೇಕಲ್ಮಠದ ಚನ್ನೇಶ್ವರ ಶಾಲೆ ಮತಗಟ್ಟೆಯಲ್ಲಿ ದಂಪತಿ ಸಮೇತ ಆಗಮಿಸಿ ಮತದಾನ - - -
2024ರ ಲೋಕಸಭಾ ಚುನಾವಣೆ ರಾಷ್ಟ್ರದಲ್ಲಿ 3ನೇ ಹಂತ ಹಾಗೂ ರಾಜ್ಯದಲ್ಲಿ 2ನೇ ಹಂತದ ಈ ಚುನಾವಣೆ ನಡೆಯುತ್ತಿದ್ದು, ಒಟ್ಟಾರೆಯಾಗಿ ಶೇ.80ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದು ಮತ್ತೊಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮತದಾನದ ದಿನವಾದ ಮೇ 7ರಂದು ಧರ್ಮಪತ್ನಿ ಸುಮಿತ್ರ ರೇಣುಕಾಚಾರ್ಯ ಅವರೊಂದಿಗೆ ಹಿರೇಕಲ್ಮಠದ ಚನ್ನೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 105ಕ್ಕೆ ಆಗಮಿಸಿ ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು, ಅನಂತರ ಮತಗಟ್ಟೆಯೊಳಗೆ ಹೋಗಿ ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ವಿಶ್ವದ ಬಹಳಷ್ಟು ರಾಷ್ಟ್ರಗಳು ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ಬಹುನಿರೀಕ್ಷೆಯಿಂದ ಗಮನಿಸುತ್ತಿವೆ. ದೇಶದ ಜನ ಕೂಡ ಈಗಾಗಲೇ ನರೇಂದ್ರ ಮೋದಿ ಸಮರ್ಥ ನಾಯಕತ್ವದಲ್ಲಿ ಬಹಳಷ್ಟು ನಂಬಿಕೆ ಹೊಂದಿ, ದೇಶದ ಸರ್ವತೋಮುಖ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಗೆ ಮತ ನೀಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷವಾಗಿ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾರರಿಗೆ ಈಗಾಗಲೇ ಬಿಜೆಪಿಗೆ ಹೆಚ್ಚಿನ ಮತ ನೀಡಿ ಎಂದು ಮನವಿಮಾಡಿಕೊಂಡಿದ್ದೇನೆ. ಅವರು ಕೂಡ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಧರ್ಮಪತ್ನಿ ಸುಮಿತ್ರ ರೇಣುಕಾಚಾರ್ಯ ಹಿರೇಕಲ್ಮಠದ ಚನ್ನೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 105ರಲ್ಲಿ ಬೆಳಗ್ಗೆ ಮತದಾನ ಹಕ್ಕು ಚಲಾಯಿಸಿದರು.