ಶಿರಾಳಕೊಪ್ಪ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕಿಗೆ ಆಗಮಿಸಿದ ಕೇಂದ್ರ ರೇಲ್ವೆ ಸಚಿವ ಸೋಮಣ್ಣ ಅವರನ್ನು ಸಂಸದ ರಾಘವೇಂದ್ರ ಸಮ್ಮುಖದಲ್ಲಿ ಬ್ಯಾಂಕಿನ ಅಧ್ಯಕ್ಷ ವೇದಮೂರ್ತಿ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿ ಸಂಸದರಾಗಿದ್ದರೂ ಜನರನ್ನು ಮರೆತಿಲ್ಲ. ಹಾಗೆಯೇ ಜನರ ಭಾವನೆಗಳಿಗೆ ಸ್ಪಂದಿಸುವ ಸಂಸದರಾಗಿದ್ದಾರೆ ಎಂಬ ಸಂಗತಿ ತಿಳಿದು ಸಂತಸವಾಗಿದೆ ಎಂದು ಜನಶಕ್ತಿ ಹಾಗೂ ಕೇಂದ್ರ ರೇಲ್ವೆ ಸಹಾಯಕ ಸಚಿವ ಸೋಮಣ್ಣ ಶ್ಲಾಘನೆ ವ್ಯಕ್ತಪಡಿಸಿದರು.ಗುರುವಾರ ಬೆಳಗ್ಗೆ ಶಿವಮೊಗ್ಗಕ್ಕೆ ಹೋಗುವ ಮಾರ್ಗಮಧ್ಯೆ ಶಿರಾಳಕೊಪ್ಪ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕಿಗೆ ಇಲ್ಲಿಯ ಆಡಳಿತ ಮಂಡಳಿ ಆಹ್ವಾನ ಮೇರೆಗೆ ಆಗಮಿಸಿ ಸನ್ಮಾನ ಸ್ವೀಕರಿಸಿದ ಅವರು ನಂತರ ಪತ್ರಿಕಾ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದರು.ನಾನು ಜನಶಕ್ತಿ ಮತ್ತು ರೇಲ್ವೆ ಮಂತ್ರಿ ಆದ ಮೇಲೆ ನಮ್ಮ ಜಿಲ್ಲೆಗೆ ಬರಲೇ ಬೇಕು ಎಂಬ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಜಿಲ್ಲೆಗೆ ಬರುತ್ತಿದ್ದೇನೆ. ನಮ್ಮ ನಾಯಕ ಬಿ.ಎಸ್ ಯಡಿಯೂರಪ್ಪನವರ ಪುತ್ರ ಸಂಸದ ರಾಘವೇಂದ್ರ ಅವರ ವಿನಂತಿ ಮೇರೆಗೆ ದಿನಪೂರ್ತಿ ಅವರೊಂದಿಗೆ ಇದ್ದು, ನಮ್ಮ ಇಲಾಖೆಯಿಂದ ಏನೆಲ್ಲ ಕೆಲಸಗಳು ಆಗಬೇಕು ಎಂಬ ಬಗ್ಗೆ ಕೇಂದ್ರದ ರಾಜ್ಯದ ಅಧಿಕಾರಿಗಳು ಬರಲಿದ್ದು, ಅವರೊಂದಿಗೆ ಚರ್ಚೆ ಮಾಡಿ ಮುಂದುವರೆಯುತ್ತೇವೆ ಎಂದರು.
ಶಿವಮೊಗ್ಗದಿಂದ ಶಿಕಾರಿಪುರ-ಶಿರಾಳಕೊಪ್ಪ ಮಾಗರ್ವಾಗಿ ಉತ್ತರ ಕರ್ನಾಟಕಕ್ಕೆ ರೇಲ್ವೆ ಯೋಜನೆ ರೂಪಿಸುವಂತೆ ವರದಿಗಾರರು ಕೇಳಿದ ಪ್ರಶ್ನೆಗೆ, ಇಂದು ಶಿವಮೊಗ್ಗದಲ್ಲಿ ರೇಲ್ವೆ ಜನರಲ್ ಮ್ಯಾನೇಜರ್ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ತಾಳಗುಪ್ಪದಿಂದ ಸಿರಾ ಹಾಗೆಯೇ, ಸಿರ್ಸಿಗೆ ರೇಲ್ವೆ ಮಾರ್ಗ ರಚಿಸುವ ಕುರಿತು ಚರ್ಚೆ ಮಾಡುತ್ತೇವೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನು ೩-೪ ತಿಂಗಳಲ್ಲಿ ಈ ತರಹದ ಎಲ್ಲಾ ಬೆಳವಣಿಗೆಗೆ ಕಾಯಕಲ್ಪ ದೊರಕಲಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಹೆಚ್.ಎಂ.ಗಂಗಮ್ಮ, ನಟರಾಜ್ ಸೂರಣಗಿ , ನಗರ ಅಧ್ಯಕ್ಷ ಚೆನ್ನವೀರಶೆಟ್ಟಿ, ಶಿವಾನಂದ ಸ್ವಾಮಿ, ಹೆಚ್.ಎಂ.ಚಂದ್ರಶೇಖರ, ರವಿ ಶಾನಭೋಗ, ಲೋಕೇಶ್, ಶಿಕಾರಿಪುರದ ಹುಲ್ಮಾರ್ ಮಹೇಶ್, ಚಂದ್ರಶೇಖರ್ ಮಂಚಾಲಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.