ಕನ್ನಡಪ್ರಭ ವಾರ್ತೆ ಆಳಂದ
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತದಾರರು ಹುರುಪಿನಿಂದ ತಂಡೋಪ ತಂಡವಾಗಿ ಆಗಮಿಸಿ ಪ್ರಜಾಪ್ರಭುತ್ವದ ಹಬ್ಬವಾದ ಮತದಾನಲ್ಲಿ ಪಾಲ್ಗೊಂಡಿದ್ದರು. ಮಾದನಹಿಪ್ಪರಗಾ ವಲಯದ ಚಳಗೇರಾ ಸೇರಿದಂತೆ ಹಲವೆಡೆ ಮತ ಯಂತ್ರಗಳ ತಾಂತ್ರಿಕ ತೊಂದರೆಯಾಗಿ ಮತದಾನಕ್ಕೆ ಕೆಲಕಾಲ ಅಡ್ಡಿಯಾಗಿದ್ದು ಬಿಟ್ಟರೆ ಇನ್ನೂಳಿದ ಕಡೆ ಸುವ್ಯವಸ್ಥಿತವಾಗಿ ಮತದಾನ ನಡೆದಿದೆ.
ಪಟ್ಟಣದ ದಿಗಂಬರ ಜೈನ್ ಪಾಠಶಾಲೆಯಲ್ಲಿ ಸ್ಥಾಪಿಸಿದ ಮೂರು ಮತಗಟ್ಟೆ ಕೇಂದ್ರದಲ್ಲಿ ನಿಗದತ ಸಮಯಕ್ಕೆ ಮತದಾನ ಆರಂಭಗೊಂಡಿತ್ತಾದರು ಸುಮಾರು 2ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಬೆಳಕಿನ ಕೊರತೆಯ ನಡುವೆ ಮತದಾನ ನಡೆದಿದ್ದು, ಇಲ್ಲಿನ ಮತದಾರರು ಆಕ್ರೋಶ ಹೊರಹಾಕಿದ್ದಾರೆ.ಬಹುತೇಕ ಮತಗಟ್ಟೆಗಳ ಮುಂದೆ ಬೆಳಿಗ್ಗೆಯಿಂದಲೇ ಮಹಿಳಾ, ಪುರುಷ ಮತ್ತು ಯುವ ಮತದಾರರು ಸಾಲುಗಟ್ಟಿ ನಿಂತು ಮತಚಲಾಯಿಸಿದರು.
ಕಿಣ್ಣಿಸುಲ್ತಾನ ಗ್ರಾಮದ ಮತಗಟ್ಟೆ ಸಂಖ್ಯೆ-44ರಲ್ಲಿ ಮಾತ್ರ ವಿವಿಪ್ಯಾಡ್ ತಾಂತ್ರಿಕ ತೊಂದರೆಯಿಂದ ರೀಪ್ಲ್ಲೇಸ್ ಮಾಡಲಾಗಿದ್ದು, ಬಿಟ್ಟರೆ ಬಹುತೇಕ ಎಲ್ಲ ಕಡೆ ಇವಿಎಂ ಯಂತ್ರಗಳಲ್ಲಿ ಈ ಬಾರಿ ಕೈಕೊಡುವುದಾಗಲ್ಲಿ, ಅಥವಾ ತಾಂತ್ರಿಕ ತೊಂದರೆ ಎದುರಾಗಿದ್ದು ಕಂಡುಬಾರದೆ ಯಶಸ್ವಿಯಾಗಿ ಕಾರ್ಯಾಚರಣೆ ಕಾರ್ಯನಿರ್ವಹಿಸಿವೆ ಎಂದು ಚುನಾವಣೆ ಮಾರ್ಗಾಧಿಕಾರಿಗಳು ಹೇಳಿದ್ದಾರೆ.
ಗಣ್ಯರಿಂದ ಮತದಾನ: ಸರಸಂಬಾ ಗ್ರಾಮದಲ್ಲಿ ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ, ತಡಕಲ್ನಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದದಾರ, ಮುನ್ನಹಳ್ಳಿಯಲ್ಲಿ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ತಡೋಳಾದಲ್ಲಿ ಸಿಪಿಐ ಮುಖಂಡ ಮೌಲಾ ಮುಲ್ಲಾ, ನಿಂಗದಳ್ಳಿಯಲ್ಲಿ ಮುಖಂಡ ರಮೇಶ ಲೋಹಾರ ಸೇರಿ ಮಠಾಧೀಶರು, ಮತ್ತು ಮುಖಂಡರುಗಳು ಸಹ ಮತದಾನ ಕೈಗೊಂಡರು.