ಹೊನ್ನಾವರ: ತಾಲೂಕಿನ ಗುಂಡಬಾಳ ನದಿಯಿಂದ ನೆರೆಪೀಡಿತ ಪ್ರದೇಶದ ಕಾಳಜಿ ಕೇಂದ್ರಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಭೇಟಿ ನೀಡಿದರು.ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 2 ಶಾಲೆಗೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರದಲ್ಲಿ ಕುಂದುಕೊರತೆಗಳನ್ನು ಆಲಿಸಿದರು. ಎಷ್ಟು ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದರು. 150 ಮನೆಗೆ ಪ್ರವಾಹ ಭೀತಿ ಆವರಿಸುತ್ತದೆ ಎಂದು ಪಿಡಿಒ ಅಣ್ಣಪ್ಪ ಮುಕ್ರಿ ತಿಳಿಸಿದರು.
ನಂತರ ಗುಂಡಿಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ನಂ. 1 ಶಾಲೆಗೆ ತೆರಳಿ ಅಲ್ಲಿಯು ಸಹ ನೆರೆ ಸಂತ್ರಸ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಗೋವಿಂದ ನಾಯ್ಕ, ಗಣಪತಿ ನಾಯ್ಕ ಬಿ.ಟಿ., ಎಂ.ಎಸ್. ಹೆಗಡೆ ಕಣ್ಣಿ, ಎಚ್.ಆರ್. ಗಣೇಶ ಬಿಜೆಪಿ ಕಾರ್ಯಕರ್ತರು ಇದ್ದರು.ಮಳೆ ಅಬ್ಬರಕ್ಕೆ 5 ಮನೆ ಭಾಗಶಃ ಹಾನಿ
ಕುಮಟಾ: ತಾಲೂಕಿನಾದ್ಯಂತ ಸೋಮವಾರ ಮಳೆ ಅಬ್ಬರದಿಂದ ಸುರಿದಿದ್ದು, ಕುಮಟಾ ವಿಭಾಗದಲ್ಲೇ ಅತಿಹೆಚ್ಚು ದಾಖಲೆಯ ೨೨೧.೮ ಮಿಮೀ ಮಳೆ ಸುರಿದಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.ಕತಗಾಲ ಹೋಬಳಿಯಲ್ಲಿ ೧೫೯.೩ ಮಿಮೀ, ಗೋಕರ್ಣ ಭಾಗದಲ್ಲಿ ೭೩.೨ ಮಿಮೀ ಮಳೆಯಾಗಿದೆ. ಮಳೆಯಿಂದಾಗಿ ೫ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮತ್ತು ಶಶಿಹಿತ್ತಲು, ಗುಂದ ಇನ್ನಿತರ ಕಡೆಗಳಲ್ಲಿ ೮ ಮನೆಗಳಿಗೆ ನೀರು ನುಗ್ಗಿದೆ.ಕೋನಳ್ಳಿಯ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ೨೫ ಕುಟುಂಬಗಳ ೩೭ ಮಂದಿ, ಊರಕೇರಿ ಕಡವು ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ೨೦ ಕುಟುಂಬಗಳ ೩೫ ಮಂದಿ ವಾಸ್ತವ್ಯ ಹೊಂದಿದ್ದಾರೆ.
ಈ ನಡುವೆ ಪಟ್ಟಣ ವ್ಯಾಪ್ತಿಯಲ್ಲಿ ಮಾಡಲಾದ ಒಳಚರಂಡಿ ಮ್ಯಾನ್ಹೋಲ್ಗಳಲ್ಲೂ ನೀರು ಉಕ್ಕಿ ಹರಿದು ಮೀನುಪೇಟೆ ರಸ್ತೆ, ಗುಜರಗಲ್ಲಿ ಇನ್ನಿತರ ಹಲವೆಡೆ ಸಂಚಾರಕ್ಕೂ ಕಿರಿಕಿರಿ ಅನುಭವಿಸುವಂತಾಗಿದೆ.