ಎಂಎಸ್‌ಪಿ: ರಾಜ್ಯದ ರೈತರಿಗೆ 765 ಕೋಟಿ ರು. ಬಾಕಿ

KannadaprabhaNewsNetwork |  
Published : Aug 05, 2025, 11:45 PM IST
ಭತ್ತ | Kannada Prabha

ಸಾರಾಂಶ

ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಜ್ಯದಲ್ಲಿ ರಾಗಿ, ಭತ್ತ, ಜೋಳ ಮಾರಾಟ ಮಾಡಿದ್ದ ಸುಮಾರು 80 ಸಾವಿರ ರೈತರಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಜ್ಯದಲ್ಲಿ ರಾಗಿ, ಭತ್ತ, ಜೋಳ ಮಾರಾಟ ಮಾಡಿದ್ದ ಸುಮಾರು 80 ಸಾವಿರ ರೈತರಿಗೆ ಧಾನ್ಯ ಖರೀದಿಸಿ ಎರಡು ತಿಂಗಳಾದರೂ 765.47 ಕೋಟಿ ರು. ಪಾವತಿಸದೆ ಸರ್ಕಾರ ಬಾಕಿ ಉಳಿಸಿಕೊಂಡಿದೆ.

ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಎರಡು ತಿಂಗಳಾಗಿದ್ದರೂ ಇನ್ನೂ ಹಣ ಸಂದಾಯವಾಗದಿರುವುದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ, ಕೂಲಿ ಕಾರ್ಮಿಕರಿಗೆ ಹಣ ನೀಡಲು ಅನ್ನದಾತರು ಪರದಾಡುವಂತಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ಕೆಎಫ್‌ಸಿಎಫ್‌ಸಿ), ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ(ಕೆಎಸ್‌ಸಿಎಂಎಫ್‌) ಮತ್ತು ರಾಜ್ಯ ಕೃಷಿ ಮಾರಾಟ ಮಂಡಳಿ(ಕೆಎಸ್‌ಎಎಂಬಿ)ಗಳು ನೋಡೆಲ್‌ ಏಜೆನ್ಸಿಗಳಾಗಿದ್ದು, ರೈತರಿಂದ ಎಂಎಸ್‌ಪಿ ಅಡಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿವೆ. ರಾಜ್ಯದಲ್ಲಿ ಒಟ್ಟಾರೆ, 130ಕ್ಕೂ ಅಧಿಕ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆದಿತ್ತು.

2.35 ಲಕ್ಷ ರೈತರಿಂದ ಖರೀದಿ:

ರಾಜ್ಯದಲ್ಲಿ ಒಟ್ಟಾರೆ 2,35,185 ರೈತರಿಂದ ಕೃಷಿ ಉತ್ಪನ್ನಗಳನ್ನು ಸಹಕಾರ ಇಲಾಖೆ ಮೂಲಕ ಖರೀದಿ ಮಾಡಲಾಗಿದೆ. ಇದರಲ್ಲಿ 2.17 ಲಕ್ಷ ರೈತರಿಂದ 1484 ಕೋಟಿ ರು. ಮೊತ್ತದ 3.46 ಲಕ್ಷ ಮೆಟ್ರಿಕ್‌ ಟನ್‌ ರಾಗಿ, 17,991 ರೈತರಿಂದ 388 ಕೋಟಿ ರು. ಮೌಲ್ಯದ 1.15 ಲಕ್ಷ ಮೆಟ್ರಿಕ್‌ ಟನ್‌ ಜೋಳ ಹಾಗೂ 158 ರೈತರಿಂದ 1.15 ಕೋಟಿ ರು. ಮೌಲ್ಯದ 501 ಮೆಟ್ರಿಕ್‌ ಟನ್‌ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗಿತ್ತು.

ಯೋಜನೆಯಡಿ ಈಗಾಗಲೇ ಒಂದು ಸಾವಿರ ಕೋಟಿ ರುಪಾಯಿಗೂ ಅಧಿಕ ಹಣವನ್ನು ರೈತರಿಗೆ ಪಾವತಿಸಲಾಗಿದೆ. ಆದರೆ ಇನ್ನೂ 765 ಕೋಟಿ ರು. ಪಾವತಿಸಲು ಬಾಕಿ ಇದೆ. ಮಳೆಗಾಲದಿಂದಾಗಿ ರೈತರಿಗೆ ಹಣದ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಬಾಕಿ ಹಣವನ್ನು ಶೀಘ್ರದಲ್ಲೇ ಪಾವತಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.-ಬಾಕ್ಸ್‌-

3.46 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಮಾತ್ರ ಖರೀದಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಂದ 4.3 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸಲು ಅವಕಾಶ ಕಲ್ಪಿಸಿತ್ತು. ಆದರೆ ಕಳೆದ ಸಾಲಲ್ಲಿ ಬರಗಾಲ ಉಂಟಾಗಿ ಫಸಲಿಗೆ ಹೊಡೆತ ಬಿದ್ದಿದ್ದರಿಂದ ಹೆಚ್ಚು ಉತ್ಪಾದನೆ ಸಾಧ್ಯವಾಗಲಿಲ್ಲ. ಆದ್ದರಿಂದ 3.46 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಮಾತ್ರ ಖರೀದಿಯಾಗಿದೆ.-ಕೋಟ್‌-

ಶೀಘ್ರ ಹಣ ಪಾವತಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸುಮಾರು 80 ಸಾವಿರ ರೈತರಿಗೆ 765 ಕೋಟಿ ರು. ಬಾಕಿ ಪಾವತಿಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಶೀಘ್ರದಲ್ಲೇ ಹಣ ಪಾವತಿಸಲಾಗುವುದು.

-ಜಗದೀಶ್‌, ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ -- ಬಾಕ್ಸ್‌-

ರೈತರಿಂದ ಖರೀದಿಸಿದ್ದ ಕೃಷಿ ಉತ್ಪನ್ನಗಳ ಮಾಹಿತಿ

ಉತ್ಪನ್ನದ ಹೆಸರುಖರೀದಿಸಿದ ಪ್ರಮಾಣ(ಮೆಟ್ರಿಕ್‌ ಟನ್‌ಗಳಲ್ಲಿ)ರೈತರ ಸಂಖ್ಯೆಮೌಲ್ಯ(ಕೋಟಿಗಳಲ್ಲಿ)ರಾಗಿ3460782170361484

ಭತ್ತ5011581.15ಜೋಳ11535117991388

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ