ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಂದಿನ ವರ್ಷ ನಡೆಯಲಿರುವ ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಹಾಕಿ ಹಬ್ಬಕ್ಕೆ ಮುದ್ದಂಡ ಕುಟುಂಬಸ್ಥರು ಪೂರ್ವಭಾವಿ ತಯಾರಿಯಲ್ಲಿ ತೊಡಗಿದ್ದಾರೆ.ನಗರದ ಹೊರ ವಲಯದ ಕರವಲೆ ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯದಲ್ಲಿ ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿ ಹಾಕಿ ಹಬ್ಬದ ಯಶಸ್ಸಿಗಾಗಿ ಪ್ರಾರ್ಥಿಸಿದರು. 2025ರಲ್ಲಿ ಹಾಕಿ ಹಬ್ಬ ನಡೆಸಲು ಮುದ್ದಂಡ ಕುಟುಂಬಕ್ಕೆ ಕೊಡವ ಹಾಕಿ ಅಕಾಡೆಮಿ ಅಧಿಕೃತವಾಗಿ ಹಕ್ಕೋಲೆ (ಹಕ್ಕುಪತ್ರ) ನೀಡುವ ಮೂಲಕ ಶುಭ ಹಾರೈಸಿತು.
ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ, ಉಪಾಧ್ಯಕ್ಷರಾದ ಕುಕ್ಕೇರ ಜಯ ಚಿಣ್ಣಪ್ಪ, ಬರಕಡ ಡೀನಾ ಪೂವಯ್ಯ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ, ಎಲ್ಲಾ ನಿರ್ದೇಶಕರು, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಮುದ್ದಂಡ.ಬಿ.ದೇವಯ್ಯ, ಕಾರ್ಯಕಾರಿ ಮಂಡಳಿಯ ಮುದ್ದಂಡ ಡೀನ್ ಬೋಪಣ್ಣ, ಮುದ್ದಂಡ ರಾಯ್, ಮುದ್ದಂಡ ರಂಜಿತ್ ಪೊನ್ನಪ್ಪ, ಮುದ್ದಂಡ ಕಿರಣ್ ಪೂಣಚ್ಚ, ಮುದ್ದಂಡ ಆದ್ಯ ತಿಮ್ಮಯ್ಯ ಮತ್ತಿತರರು ಇದ್ದರು.ಮುಂದಿನ ವರ್ಷ ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ‘ಮುದ್ದಂಡ ಹಾಕಿ ಹಬ್ಬ’ ನಡೆಯಲಿದೆ.
ಜೂ.1ರಂದು ಪ್ರಬಂಧ, ಚಿತ್ರ ಸ್ಪರ್ಧೆ:ವಿಶ್ವ ಪರಿಸರ ದಿನಾಚರಣೆ-2024ರ ಪ್ರಯುಕ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಡಗು ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲಾ ಮಕ್ಕಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆ (ಮಹದೇವಪೇಟೆ, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಮಡಿಕೇರಿ) ಯಲ್ಲಿ ಜೂ.1 ರಂದು ಬೆಳಗ್ಗೆ 9.30ರಿಂದ ನಡೆಯಲಿದೆ.(ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಚಿತ್ರಕಲೆಗೆ ಬೇಕಾಗುವ ಬಣ್ಣ ಇನ್ನಿತರೆ ವಸ್ತುಗಳನ್ನು ವಿದ್ಯಾರ್ಥಿಗಳೇ ತರಬೇಕು) ಈ ವರ್ಷದ ಘೋಷಣ ವಾಕ್ಯವು ‘ಭೂ ಮರುಸ್ಥಾಪನೆ, ಮರು ಭೂಮೀಕರಣ ಹಾಗೂ ಬರ ತಡೆಯುವಿಕೆ’ (Land Restoration, Desertification and Drought Resilience) ಆಗಿರುತ್ತದೆ.ಆಸಕ್ತರು ಸ್ಥಳದಲ್ಲಿಯೇ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ: ಎಂ.ಜಿ.ರಘುರಾಮ್, ಪರಿಸರ ಅಧಿಕಾರಿಗಳು, 9845026348, ಆಸ್ಟಿನ್ ಕೆ.ಎ.ಯೋಜನಾ ಸಹಾಯಕರನ್ನು 7760738447 (ಕಚೇರಿ: 08272-221855) ಹಾಗೂ ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪರ್ಕಿಸಬಹುದು ಎಂದು ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಎಂ.ಜಿ.ರಘುರಾಮ್ ತಿಳಿಸಿದ್ದಾರೆ.