ಕಾರಟಗಿ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಕಾರಟಗಿ ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಿದ್ದು, ನಿವಾಸಿಗಳು ಪುರಸಭೆಯೊಂದಿಗೆ ಸಹಕರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಮನವಿ ಮಾಡಿದರು.
ಬೆಳಗ್ಗೆಯಿಂದಲೇ ಸುಮಾರು ಏಳೆಂಟು ವಾರ್ಡ್ಗಳಿಗೆ ಭೇಟಿ ನೀಡಿದ ಅವರು, ಪೌರ ಕಾರ್ಮಿಕರು, ನಿತ್ಯ ವಾರ್ಡ್ಗಳಲ್ಲಿ ಕಸ ವಿಲೇವಾರಿ, ಮನೆ ಮನೆಗಳಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸುವುದರ ಮಾಹಿತಿ ಪಡೆದರು. ನಂತರ ಕೆಲ ವಾರ್ಡ್ಗಳಲ್ಲಿ ರಸ್ತೆ, ಎರಡು ಬದಿಯ ಚರಂಡಿಗಳ ಸ್ವಚ್ಛತೆ ಮಾಡುತ್ತಿರುವ, ಮಾಡಿರುವುದನ್ನು ಖುದ್ದಾಗಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಪುರಸಭೆಯಿಂದ ಮೊದಲು ಪಟ್ಟಣದ ಎಲ್ಲ ವಾರ್ಡ್ಗಳು, ಮುಖ್ಯರಸ್ತೆಗಳ ಸ್ವಚ್ಛತೆಗೆ ನಿಗಾ ವಹಿಸಲಾಗಿದೆ. ನಿತ್ಯ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆಗಾಗಿ ನಿವಾಸಿಗಳು ಸಹ ಪುರಸಭೆಯ ಸಿಬ್ಬಂದಿಗೆ ಸಹಕಾರ ನೀಡಬೇಕು. ಇನ್ನು ಕುಡಿವ ನೀರಿನ ಸಮಸ್ಯೆಯಾಗದಂತೆ ಎಲ್ಲ ಮುಂಜಾಗ್ರತ ಕ್ರಮ ವಹಿಸಲಾಗಿದೆ. ಹೊರವಲಯದಲ್ಲಿನ ಬೃಹತ್ ಕೆರೆಯಲ್ಲಿ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ. ಎಲ್ಲ ವಾರ್ಡ್ಗಳಲ್ಲಿಯೂ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಪುರಸಭೆ ವ್ಯಾಪ್ತಿಯ ಕೊಳವೆಬಾವಿಯಲ್ಲಿನ ನೀರು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಶುದ್ಧ ನೀರು, ಪಟ್ಟಣದ ಸ್ವಚ್ಛತೆಯೇ ಮೊದಲ ಆದ್ಯತೆ ಎಂದರು.ಕೆಲ ವಾರ್ಡ್ಗಳಲ್ಲಿ ನಿವಾಸಿಗಳ ಅಹವಾಲು ಸ್ವೀಕರಿಸಿದ ಅವರು, ಕೆಲಸ ನಿರ್ವಹಿಸುವ ಬಗ್ಗೆ ಪೌರಕಾರ್ಮಿಕರಿಗೆ ಕೆಲ ಸೂಚನೆಗಳನ್ನು ಸ್ಥಳದಲ್ಲಿಯೇ ನೀಡಿದರು. ಆರೋಗ್ಯ ನಿರೀಕ್ಷಕಿ ಅಕ್ಷತಾ ಕಮ್ಮಾರ ಇದ್ದರು.