- 18ರಿಂದ ಊರಮ್ಮನ ಜಾತ್ರೆ ಹಿನ್ನೆಲೆ ಕಾಮಗಾರಿ । ಸ್ಪಂದಿಸದಿದ್ದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದ್ದ ಡಿಸಿ- - - ಕನ್ನಡಪ್ರಭ ವಾರ್ತೆ ಹರಿಹರ ನಗರದಲ್ಲಿ ಬೆಳಂಬೆಳಗ್ಗೆ ಸ್ವಚ್ಛತಾ ಕಾರ್ಯಾಚರಣೆಗೆ ಇಳಿದಿರುವ ನಗರಸಭೆ ಆಡಳಿತ ರಾಜಕಾಲುವೆಗಳು, ವಿವಿಧ ಚರಂಡಿಗಳಲ್ಲಿ ದಶಕಗಳ ಕಾಲ ಶೇಖರವಾಗಿದ್ದ ಹೂಳೆತ್ತುವ ಕಾಮಗಾರಿಗೆ ಚುರುಕು ನೀಡಿದೆ.
ಬುಧವಾರ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ ಸ್ವಚ್ಛತೆ, ನಿರಂತರ ನೀರು, ವಿದ್ಯುತ್ ಪರ್ಯಾಯ ವ್ಯವಸ್ಥೆ, ಬಂದೋಬಸ್ತ್ ಮುಂತಾದ ಕ್ರಮಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ನಿರ್ಲಕ್ಷಿಸಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆ ಮಾಡುವುದಾಗಿಯೂ ಎಚ್ಚರಿಸಿದ್ದರು. ಈ ಹಿನ್ನೆಲೆ ಅಧಿಕಾರಿಗಳು ನಗರ ಸ್ವಚ್ಛತಾ ಕಾರ್ಯಗಳಿಗೆ ಚುರುಕು ನೀಡಿದ್ದಾರೆ.
ನಗರಸಭೆ ಪೌರಾಯುಕ್ತ ಪಿ.ಸುಬ್ರಮಣ್ಯ ಮಾತನಾಡಿ, ಜಿಲ್ಲಾಧಿಕಾರಿ ಸೂಚನೆಯಂತೆ ಗುರುವಾರದಿಂದ ಪ್ರತಿದಿನ ಮುಂಜಾನೆ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ, ಚರಂಡಿಗಳ ಸ್ವಚ್ಛತೆ, ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರು ಸಂಪರ್ಕ ಸಮಸ್ಯೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು.ಸಾರ್ವಜನಿಕರು ಮನೆಯ ಕಸವನ್ನು ಖಾಲಿ ಜಾಗ, ಚರಂಡಿಯಲ್ಲಿ ಎಸೆಯುತ್ತಿದ್ದಾರೆ. ಇದರಿಂದ ತ್ಯಾಜ್ಯನೀರು ಹರಿಯಲು ಸಮಸ್ಯೆಯಾಗಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ಜನರ ಆರೋಗ್ಯ ಹದಗೆಡುತ್ತದೆ. ವಾರ್ಡುಗಳ ಪ್ರತಿಯೊಂದು ರಸ್ತೆಯಲ್ಲಿ ನಗರಸಭೆ ಕಸ ಸಂಗ್ರಹ ವಾಹನಗಳು ಬರುತ್ತವೆ. ನಾಗರಿಕರು ಕಸವನ್ನು ಬೇರ್ಪಡಿಸಿ, ಕಸನದ ವಾಹನಕ್ಕೆ ಕಡ್ಡಾಯವಾಗಿ ನೀಡಬೇಕು. ಉತ್ತಮ ಪರಿಸರ ನಿರ್ಮಾಣಕಕ್ಕೆ ಕೈಜೋಡಿಸಬೇಕು ಎಂದರು.
ಉಪಾಧ್ಯಕ್ಷ ಎಂ. ಜಂಬಣ್ಣ ಮಾತನಾಡಿ, ಮಾ 18ರಿಂದ 22 ರವರೆಗೂ ಗ್ರಾಮ ದೇವತೆ ಜಾತ್ರೆ ನಡೆಯಲಿದೆ. ಈ ನಿಮಿತ್ತ 31 ವಾರ್ಡುಗಳ ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ಸ್ವಚ್ಛತಾ ಕ್ರಮಕ್ಕೆ ಮುಂದಾಗಬೇಕು. ಪ್ರತಿ ವಾರ್ಡಿನ ನಾಗರೀಕರು ಸಹ ಇದಕ್ಕೆ ಸ್ಪಂದಿಸಬೇಕು. ಜಾತ್ರೆ ಹಿನ್ನೆಲೆ ಪ್ರತಿದಿನ ಆಯುಕ್ತರು ಆರೋಗ್ಯ ನಿರೀಕ್ಷಕ ತಾಂತ್ರಿಕ ಶಾಖೆ ತಂಡ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ, ನಾಗರೀಕರಿಗೆ ಸ್ವಚ್ಛತೆ ಕ್ರಮ ಕೈಗೊಳ್ಳಲು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ ಎಂದರು.ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ ನಾಯ್ಕ್, ಮಲ್ಲಿಕ್ ಕುಮಾರ್, ರವಿ ಪ್ರಕಾಶ್, ದಫೆದಾರ್ ದಯಾನಂದ್ ಬಿ., ಪೌರಕಾರ್ಮಿಕರು ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
- - -ಕೋಟ್
ಹರಿಹರ ನಗರದಲ್ಲಿ ಅಲ್ಲಲ್ಲಿ ಖಾಲಿ ನಿವೇಶನಗಳು ಇವೆ. ನಿವೇಶನಗಳಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಕೂಡಲೇ ಮಾಲೀಕರು ನಿವೇಶನ ಸ್ವಚ್ಛತೆಗೆ ಕ್ರಮ ಕೈಬೇಕು. ಇಲ್ಲವಾದಲ್ಲಿ ನಗರಸಭೆಯಿಂದ ಸ್ವಚ್ಛಗೊಳಿಸಿ ದಂಡ ವಿಧಿಸಲಾಗುವುದು- ಪಿ.ಸುಬ್ರಮಣ್ಯ, ಪೌರಾಯುಕ್ತ, ನಗರಸಭೆ
- - --06ಎಚ್ಆರ್ಆರ್02:
ಹರಿಹರದಲ್ಲಿ ನಗರಸಭೆ ಆಡಳಿತದಿಂದ ಜೆಸಿಬಿಗಳ ಬಳಸಿ ರಾಜಕಾಲುವೆ ಹೂಳೆತ್ತುವ ಮೂಲಕ ಸ್ವಚ್ಛತಾ ಕಾಮಗಾರಿಗೆ ಚಾಲನೆ ನೀಡಲಾಯಿತು.