ಸಂಕ್ರಾಂತಿಯಂದು ಹುಲುಗಿನ ಮುರಡಿ ವೆಂಕಟರಮಣ ಜಾತ್ರೆ

KannadaprabhaNewsNetwork | Published : Jan 12, 2025 1:15 AM

ಗುಂಡ್ಲುಪೇಟೆ ತಾಲೂಕಿನ ಹುಲುಗಿನ ಮುರಡಿ ವೆಂಟಕರಮಣಸ್ವಾಮಿ ದೇವಸ್ಥಾನದ ರಾಜಗೋಪುರ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನಾಡಿನ ಪ್ರಸಿದ್ಧ ಹುಲುಗಿನ ಮುರುಡಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಜ.೧೪ರಂದು ದಿವ್ಯ ರಥೋತ್ಸವ ನಡೆಯಲಿದೆ. ಕಳೆದ ಜ.೭ರಿಂದಲೇ ಉತ್ಸವಾದಿಗಳು ನಡೆದಿದ್ದು, ಜ.೧೨ರಂದು ಲಕ್ಷ್ಮೀ ಕಲ್ಯಾಣ ಮಹೋತ್ಸವ, ಜ.೧೩ರಂದು ಸರ್ವ ಭೂಪಾಲವಾಹನಾ ನಂತರ ಗಜೇಂದ್ರ ಪರಿಪಾಲನಾ ಪೂರ್ವಕ ಗಜಾರೋಹಣ ಮಹೋತ್ಸವ ನಡೆಯಲಿದೆ.

ರಥೋತ್ಸವ:

ಜ.೧೪ರಂದು ಮಧ್ಯಾಹ್ನ ೧೨.೧೦ ರಿಂದ ೧೨.೩೦ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಡೋಲಾಯಮಾನಂ ಗೋವಿಂದಂ ಮಚಂಸ್ಥಂ ಮಧುಸೂದನಂ ರಥಸ್ಥಂ ಕೇಶವಂ ದುಷ್ಠ್ವಾ ಪುನರ್ಜನ್ಮ ನವಿದ್ಯತೇ ಎಂಬುದಾಗಿ ಅಪೂರ್ವ ಧ್ವಜ ಪತಾಕೆಗಳಿಂದ ಅಲಂಕೃತವಾದ ದಿವ್ಯ ರಥೋತ್ಸವ ನಡೆಯಲಿದೆ. ಜ.೧೫ ರಂದು ಡೋಲೋತ್ಸವ ಮತ್ತು ಶಯನೋತ್ಸವ ನಂತರ ನಗರ ಶೋಧನ ಪೂರ್ವಕ ಅಶ್ವಾರೋಹಣ ಮಹೋತ್ಸವ, ಜ.೧೬ರಂದು ಲಕ್ಷ್ಮೀ ಪ್ರಣಯ ಕಲಹ ಸಂಧಾನ ಅವಭೃತ ಮಹೋತ್ಸವ. ರಾತ್ರಿ ಅಂಜನೇಯಾರೋಹಣ ಮಹೋತ್ಸವ, ಜ.೧೭ ರಂದು ಮಹಾಭಿಷೇಕ ರಾತ್ರಿ ಧ್ವಜಾವರೋಹಣ ಪುಷ್ಪಯಾಗ ನಂತರ ಸಿಂಹವಾಹನ ಮಹೋತ್ಸವ ನಡೆಯಲಿದೆ.

ಬೆಟ್ಟಕ್ಕೆ ಸಾರಿಗೆ ಬಸ್‌ ಸಂಚಾರ!

ಹುಲುಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಜ.೧೪ರಂದು ನಡೆಯಲಿರುವ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಾರಿಗೆ ಬಸ್‌ಗಳಲ್ಲಿ ಮಾತ್ರ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ತಿಳಿಸಿದ್ದಾರೆ. ಕಾರು, ಮಿನಿ ವಾಹನ ಹಾಗೂ ಇತರೆ ವಾಹನಗಳಲ್ಲಿ ಬರುವ ಭಕ್ತರು ಬೆಟ್ಟದ ತಪ್ಪಲಿನಲ್ಲಿ ಪಾರ್ಕ್‌ ಮಾಡಿ ಸಾರಿಗೆ ಬಸ್‌ನಲ್ಲಿ ಬೆಟ್ಟಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದಿದ್ದಾರೆ.

ಜ.೧೪ ರ ರಥೋತ್ಸವದಂದು ಜಾತ್ರೆ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲು ಪ್ರಸಾದ್‌ ಮಾಡಿಸುವ ಭಕ್ತರು ತಮ್ಮ ವಿಳಾಸದೊಂದಿಗೆ ಪೂರ್ವಭಾವಿಯಾಗಿ ತಹಸೀಲ್ದಾರ್‌ ಕಚೇರಿಯಿಂದ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.