ಬೆಂಗಳೂರು : ಅಸಹಜ ಸಾವು ಎಂದುಕೊಂಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮದ್ಯದ ಅಮಲಿನಲ್ಲಿ ಪರಿಚಿತರಿಬ್ಬರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವುದು ವೈಟ್ಫೀಲ್ಡ್ ಪೊಲೀಸರ ತನಿಖೆಯಿಂದ ಬಯಲಾಗಿದೆ. ಮೆಹಬೂಬ್ ಪಾಷಾ (59) ಎಂಬಾತನ ಕೊಲೆ ಮಾಡಿದ ಆರೋಪದ ಮೇಲೆ ಸುಂದರ್ ಮೂರ್ತಿ(26) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 24ರಂದು ಎಸಿಎಸ್ ಲೇಔಟ್ನ ನಿರ್ಮಾಣ ಹಂತದ ಕಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಮೃತ ವ್ಯಕ್ತಿ ಮೆಹಬೂಬ್ ಪಾಷಾ ಎಂಬುದು ಗೊತ್ತಾಯಿತು. ನಂತರ ಹೆಚ್ಚಿನ ತನಿಖೆ ನಡೆಸಿದ್ದಾಗ ಪರಿಚಿತನಾದ ಮೆಹಬೂಬ್ ಪಾಷಾನನ್ನು ಮದ್ಯದ ಅಮಲಿನಲ್ಲಿ ಸುಂದರ್ ಮೂರ್ತಿ ಮರದ ತುಂಡಿನಿಂದ ಹೊಡೆದು ಕೊಂದಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಮೃತನ ಪುತ್ರಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿ ಸುಂದರ್ ಮೂರ್ತಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾಗ ಮೃತ ವ್ಯಕ್ತಿಯ ತಲೆ ಮೇಲೆ ಗಾಯವಾಗಿರುವುದು ಬಿಟ್ಟರೆ ಮೈಮೇಲೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿರಲಿಲ್ಲ. ನಂತರ ಅಪರಿಚಿತ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು ಮೃತನ ಪುತ್ರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಆರಂಭದಲ್ಲಿ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ವಾಸವಿರುವ ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಿಸಿದ್ದರು. ಈ ವೇಳೆ ಸುಂದರ್ ಮೂರ್ತಿ ಎಂಬಾತ ಆ ಏರಿಯಾದಿಂದ ನಾಪತ್ತೆಯಾಗಿರುವುದು ತಿಳಿಯಿತು. ಬಳಿಕ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಮದ್ಯದ ಪಾರ್ಟಿ ಮಾಡುವಾಗ ಮೆಹಬೂಬ್ ಪಾಷಾ ಮತ್ತು ನನ್ನ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಕೋಪದಲ್ಲಿ ನಾನು ರೀಪಿಸ್ ಪಟ್ಟಿಯಿಂದ ಮೆಹಬೂಬ್ ಪಾಷಾ ತಲೆಗೆ ಹೊಡೆದು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.