ಮುರಿನಕಟ್ಟೆ ವಿಚಾರ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ: ಕಟ್ಟೆ ಧ್ವಂಸ ತೀರಾ ಖಂಡನೀಯ
ಮುರಿನಕಟ್ಟೆಯನ್ನು ಹೆದ್ದಾರಿ ಮಧ್ಯದಲ್ಲೇ ನಿರ್ಮಿಸಲು ಒಟ್ಟಾಭಿಪ್ರಾಯ ಸಂಗ್ರಹಿಸಲಾಗಿದ್ದು, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ ಹಿಂದೆ ಕಟ್ಟೆ ಇದ್ದ ಸ್ಥಳದಲ್ಲೇ ಮುರಿನಕಟ್ಟೆ ನಿರ್ಮಿಸಲಾಗುವುದು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುರಿನಕಟ್ಟೆಯನ್ನು ಈಗಿದ್ದ ಸ್ಥಳದಲ್ಲೇ ಸುಮಾರು 150 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈ ಬಗ್ಗೆ ನೀಲ ನಕ್ಷೆಯನ್ನು ಸಹ ತಯಾರಿಸಲಾಗಿದ್ದು ಜಾಗ ಗುರುತಿಸಿಕೊಂಡು ಆದಷ್ಟು ಶೀಘ್ರದಲ್ಲಿ ಕಟ್ಟೆ ನಿರ್ಮಾಣ ಮಾಡಲಿದ್ದೇವೆ ಎಂದರು.ಮುರಿನಕಟ್ಟೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಲೈಟಿಂಗ್, ಗ್ರಿಲ್ಸ್ ಹಾಕಲಾಗುವುದು, ಅದರ ಪಕ್ಕದಲ್ಲಿ ಬಸ್ ಬೇ ನಿರ್ಮಾಣ ಮಾಡಲು ಕೂಡಾ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಯಾವುದೇ ರೀತಿಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗದಂತೆ ನೀಲ ನಕ್ಷೆ ತಯಾರಿಸಲಾಗಿದೆ ಎಂದರು.
ಕಟ್ಟೆ ನಿರ್ಮಾಣವನ್ನು ಸೌಹಾರ್ದಯುತವಾಗಿ ಮಾಡಲಾಗುವುದು. ಮುಸ್ಲಿಂ ಮತಾಂಧರು, ಕೆರಳಿದ ಯುವಕರ ಗುಂಪು ನಮ್ಮ ಮುರಿನಕಟ್ಟೆಯ ಸನಿಹದಲ್ಲಿ ನಿರ್ಮಿಸಲಾದ ನೂತನ ಕಟ್ಟೆಯನ್ನು ಧ್ವಂಸ ಮಾಡಿರುವುದು ತೀರಾ ಖಂಡನೀಯ. ಮುರಿನಕಟ್ಟೆಯ ವಿಚಾರ ಹಿಂದೂಗಳಿಗೆ, ಜಿಲ್ಲಾಡಳಿತಕ್ಕೆ ಮತ್ತು ಎನ್ಎಚ್ಐಎಗೆ ಸಂಬಂಧಿಸಿದ್ದು. ಆದರೆ ಭಟ್ಕಳದ ತಂಝೀಂ ಸಂಸ್ಥೆ, ಮುಸ್ಲಿಮರು ಇದರಲ್ಲಿ ತಲೆ ಹಾಕಿರುವುದು ಸರಿಯಲ್ಲ. ಭಟ್ಕಳದಲ್ಲಿ ಶಾಂತಿ ಕದಡಲು ಕಾಲು ಕೆರೆದು ಜಗಳ ಮಾಡಿದಂತಾಗಿದೆ. ರಾಜ್ಯದಲ್ಲಿ ಬಿಗು ಆಡಳಿತ ವ್ಯವಸ್ಥೆ ಇದ್ದಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ. ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದಿಂದಲೇ ರಾಜ್ಯದಲ್ಲಿ ಕಾನೂನು ಕೈಗೆ ತೆಗದುಕೊಳ್ಳುವ ಕೃತ್ಯ ನಡೆಯುತ್ತಿದೆ ಅಪರಾಧಿ ಕೃತ್ಯಕ್ಕೆ ಕಾಂಗ್ರೆಸ್ ಸರಕಾರದ ಬೆಂಬಲ ಇದೆ ಎಂದು ಆರೋಪಿಸಿದರು. ಹಿಂದೂ ಸಂಘಟನೆಗಳು ಜೂ. 5ರಂದು ನಡೆಸುವ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುರಿನಕಟ್ಟೆಯಂತಹ ಧ್ವಂಸ ಕೃತ್ಯ ಮುಂದೆ ನಡೆಯಬಾರದು ಎನ್ನುವ ಉದ್ದೇಶದಿಂದ ಹಿಂದೂ ಸಂಘಟನೆಗಳು ಜಾಗೃತಿ ಮೂಡಿಸಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.
---