ಜನಮನಸೂರೆಗೊಂಡ ಸಂಗೀತ ಸ್ವರಸಾಮ್ರಾಟ ಕಾರ್ಯಕ್ರಮ

KannadaprabhaNewsNetwork |  
Published : Mar 17, 2025, 12:32 AM IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಸ್ವರಸಾಮ್ರಾಟ್‌ ಕಾರ್ಯಕ್ರಮವನ್ನು ಗೋವಿಂದ ಜೋಶಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಅವರು ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ, ಕೈಲಾಸ ವಾಸ ಗೌರೀಶ ಈಶ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ಸಂಜೆ ಕ್ಷಮತಾ ಸೇವಾ ಸಂಸ್ಥೆ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರಿಗೆ ಗೌರವಾರ್ಪಣೆ ನಿಮಿತ್ತ ಏರ್ಪಡಿಸಿದ್ದ ಸ್ವರ ಸಾಮ್ರಾಟ ಕಾರ್ಯಕ್ರಮ ಜನಮನಸೂರೆಗೊಂಡಿತು.

ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಅವರು ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ, ಕೈಲಾಸ ವಾಸ ಗೌರೀಶ ಈಶ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ಭೀಮಪಲಾಸ್, ಶ್ರೀ ರಾಗ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ಪಂ. ಸಂಜೀವ ಅಭ್ಯಂಕರ, ಪಂ. ಕೈವಲ್ಯಕುಮಾರ ಗುರವ ಅವರು ವಿವಿಧ ರಾಗಗಳನ್ನೊಳಗೊಂಡ ಹಾಡು ಹಾಡಿ ಕೇಳುಗರನ್ನು ಸಂಗೀತ ಸಾಮ್ರಾಜ್ಯಕ್ಕೆ ಕರೆದೊಯ್ದರು. ಶ್ರೀಧರ ಮಾಂಡ್ರೆ, ಕೇಶವ ಜೋಶಿ, ಗುರುಪ್ರಸಾದ ಹೆಗಡೆ, ಅಜಿಂಕ್ಯ ಜೋಶಿ, ಅಭಿಷೇಕ ಶಿಂಕರ್ ವಿವಿಧ ವಾದ್ಯಗಳ ಸಾಥ್ ನೀಡಿದರು.

ಉದ್ಘಾಟನೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ, ದೇಶಿ ಕಲೆಗಳು ಮಾಯವಾಗುತ್ತಿವೆ. ಕ್ಷಮತಾ ಸಂಸ್ಥೆಯಿಂದ ಕಬಡ್ಡಿ, ಗಾಳಿಪಟ, ಸಂಗೀತೋತ್ಸವ ಏರ್ಪಡಿಸಿ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ಬಿ.ಎಸ್. ಚಕ್ರವರ್ತಿ ಮಾತನಾಡಿ, ಸಂಗೀತಕ್ಕೆ ಕಲ್ಲು ಕರಗಿಸುವ ಶಕ್ತಿ ಇದೆ. ಸಂಗೀತ ಹೊರಹೊಮ್ಮುತ್ತಿದ್ದಂತೆಯೇ ನಮ್ಮ ಮನಸ್ಸು, ದೇಹಕ್ಕೆ ಏಕಾಗ್ರತೆ ಫಲಿಸುತ್ತದೆ ಎಂದರು.

ಎಲ್‌ಐಸಿ ವಿಭಾಗೀಯ ಮಾರುಕಟ್ಟೆ ವ್ಯವಸ್ಥಾಪಕಿ ರತ್ನಪ್ರಭಾ ಶಂಕರ ಮಾತನಾಡಿದರು. ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಅಧ್ಯಕ್ಷೆ ವಿದುಷಿ ವೈಷ್ಣವಿ ಹಾನಗಲ್, ಕಾರ್ಯದರ್ಶಿ ವಿನಯ ನಾಯಕ್, ಬಾಲಚಂದ್ರ ನಾಕೋಡ, ಸಂತೋಷ ಮೊಕಾಶಿ, ಮುರಳೀಧರ ಮಳಗಿ ಸೇರಿದಂತೆ ಹಲವರಿದ್ದರು. ನಮ್ರತಾ ಜೋಶಿ ಪ್ರಾರ್ಥಿಸಿದರು. ಅರ್ಚನಾ ಜೋಶಿ ವಂದಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ