ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಹಾಗೂ ದೇಶಾದ್ಯಂತ ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ವಕ್ತಾರ ಮುಸ್ತಾಕ್ ಹೆನ್ನಾಬೈಲು ಒತ್ತಾಯಿಸಿದ್ದಾರೆ.
ಇತಿಹಾಸ ಕಾಲದಲ್ಲಿ ಮೊಘಲರೇ ಭಾರತದಲ್ಲಿ ಗೋಹತ್ಯೆ ನಿಷೇಧಿಸಿದ್ದರು ಮತ್ತು ಆಗೀನ ಮುಸ್ಲಿಮರೂ ಅದನ್ನು ಒಪ್ಪಿಕೊಂಡು ಪಾಲಿಸುತಿದ್ದರು. ಇಂದು ನಮ್ಮ ಪಕ್ಕದ ಪುಟ್ಟ ದೇಶ ನೇಪಾಳವೇ ಗೋಹತ್ಯೆಯನ್ನು ನಿಷೇಧಿಸಿದೆ. ಆದರೆ ಗೋವನ್ನು ಮಾತೆ ಎಂದು ಪೂಜಿಸುವವವರ ಆಡಳಿತ ನಡೆಸುತ್ತಿರುವ ದೇಶದಲ್ಲಿ ಗೋಹತ್ಯೆ ಇನ್ನೂ ಜಾರಿಯಲ್ಲಿದೆ ಎಂದು ವಿಷಾದಿಸಿದರು. ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಮತ್ತು ಗೋ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರಗಳು ಕೇವಲ ಪ್ರಚಾರಕ್ಕೆ ಸೀಮಿತವಾಗಿವೆ. ದೇಶಾದ್ಯಂತ ಗೋಮಾಂಸ ರಫ್ತು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಇನ್ನು ಕೂಡ ದೃಢವಾದ ಹೆಜ್ಜೆಗಳನ್ನಿಟ್ಟಿಲ್ಲ. ರಾಜಕೀಯಕ್ಕಾಗಿ ಈ ವಿವಾದವನ್ನು ಮುಂದುವರಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇನ್ನಾದರೂ ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ದೇಶಾದ್ಯಂತ ಏಕ ರೂಪದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಈ ಮೂಲಕ ಗೋ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಒಂದು ವೇಳೆ ಈ ಕುರಿತು ಸರ್ಕಾರಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದರೆ ಸಂವಿಧಾನಾತ್ಮಕ ಹಕ್ಕುಗಳ ಅಡಿಯಲ್ಲಿ ಶಾಂತಿಯುತ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಅಬ್ದುಲ್ ಹಫೀಝ್ ಖಾಸಿಮಿ, ಝಾಕೀರ್ ಹುಸೈನ್ ಉಚ್ಚಿಲ, ಇಬ್ರಾಹಿಂ ನಡುಪದವು ಹಾಗೂ ಕೋಟ ಇಬ್ರಾಹಿಂ ಸಾಹೇಬ್ ಉಪಸ್ಥಿತರಿದ್ದರು.