ಯಾದಗಿರಿ ನಗರದಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ 4ನೇ ಪುಣ್ಯಸ್ಮರಣೆಯ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯಿತು
ಕನ್ನಡಪ್ರಭ ವಾರ್ತೆ ಯಾದಗಿರಿ
ಬಡವರ ಬಂಧುವಾಗಿ ಮುತ್ತಪ್ಪ ರೈ ಅವರು ಮಾಡಿದ ಸಾಮಾಜಿಕ ಕಾರ್ಯಗಳು ಅತ್ಯಂತ ಮಾದರಿಯಾಗಿದ್ದು, ತಲಸ್ಪರ್ಶಿಯಾಗಿವೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್ ಹೇಳಿದರು.ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಸಂಘಟನೆ ಸಂಸ್ಥಾಪಕರಾದ ಮುತ್ತಪ್ಪ ರೈ ಅವರ 4ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಹಳೆ ಬಸ್ ನಿಲ್ದಾಣದ ಬಳಿ ಏರ್ಪಡಿಸಿದ್ದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾಡಿನ ಬಹುತೇಕ ಕಡೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸೇವೆ ಮಾಡಿದ ಮುತ್ತಪ್ಪ ರೈ ಅವರ ಆದರ್ಶವನ್ನು ಜಯ ಕರ್ನಾಟಕ ಸಂಘಟನೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ. ಯಾದಗಿರಿಯಲ್ಲಿ ವಿಶ್ವನಾಥ ನಾಯಕ ನೇತೃತ್ವದಲ್ಲಿ ಜನಪರ ಕಾರ್ಯಕ್ರಮಗಳು ಮಾಡುತ್ತಿದ್ದು, ಇದಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥನಾಯಕ ಮಾತನಾಡಿ, ಮುತ್ತಪ್ಪ ರೈ ಅವರು ಸಮಾಜಮುಖಿ ಕಾರ್ಯಕ್ರಮ ಮಾಡಲು ದಾರಿದೀಪವಾಗಿದ್ದು, ಜಯ ಕರ್ನಾಟಕ ಸಂಘಟನೆ ರೂಪದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದರು.ಈ ವೇಳೆ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಮೊಗದಂಪುರ್, ಶಿವರಾಜ್ ಗುತ್ತೇದಾರ್, ನಾಗರಾಜ್ ನಾಯಕ್, ರಾಮಸಮುದ್ರಾ ವಿಶ್ವರಾಧ್ಯ, ಹುಲಕಲ್, ನಾಗೇಶ್ ಗದ್ದಿಗಿ, ಸಾಬು ಚಿಂತನಹಳ್ಳಿ, ರಂಗನಾಥ ನಾಯಕ್, ಸಮೀರ್ ಹತ್ತಿಕುಣಿ, ಉದಯಕುಮಾರ್, ಮಾಳಪ್ಪ ಪೂಜಾರಿ ಬಬಲಾದಿ ಸೇರಿದಂತೆ ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.