ರೇಷ್ಮೆ , ತರಕಾರಿ ಜತೆಗೆ ಹಾಲೂ ಇದೇರೀ

KannadaprabhaNewsNetwork |  
Published : May 26, 2025, 12:36 AM IST
1 | Kannada Prabha

ಸಾರಾಂಶ

- ಇದು ಲಕ್ಷ್ಮೀಪುರದ ರೈತ ರಾಮುರವರ ಹೆಗ್ಗಳಿಕೆ

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ವರುಣ ಹೋಬಳಿ ಲಕ್ಷ್ಮೀಪುರದ ರೈತ ರಾಮು ಅವರು ರೇಷ್ಮೆ ಬೆಳೆಯಲ್ಲಿ ವಾರ್ಷಿಕ 12 ಲಕ್ಷ ರು.ಗಳಿಸುತ್ತಿದ್ದಾರೆ. ಪ್ರತಿ ಬೆಳೆಗೆ ಖರ್ಚುವೆಚ್ಚ 25-30 ಸಾವಿರ ಕಳೆದರೂ ಪ್ರತಿ ಬೆಳೆಗೆ 80 ಸಾವಿರ ರು. ನಿವ್ವಳ ಆದಾಯ ಸಿಗುತ್ತಿದೆ.

ಇವರಿಗೆ ಎರಡು ಎಕರೆ ಜಮೀನಿದೆ. ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ರೇಷ್ಮೆಯೇ ಪ್ರಮುಖ ಬೆಳೆ. ಮೈಸೂರಿನಲ್ಲಿಯೇ ಮಾರುಕಟ್ಟೆ ಇದ್ದರೂ ಕೂಡ ಜಲ್ಲಿ- ವೆಸ್ಟೇಜ್‌ ತೆಗೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ರಾಮನಗರ ಮಾರುಕಟ್ಟೆಯಲ್ಲಿ ರೇಷ್ಮೆಗೂಡನ್ನು ಮಾರಾಟ ಮಾಡುತ್ತಾರೆ. ಮೈಸೂರಿನಲ್ಲಿ ಜಲ್ಲಿಗೆ ಒಂದು ಸಾವಿರ ರು. ಸಿಕ್ಕರೆ ರಾಮನಗರದಲ್ಲಿ ಐದು ಸಾವಿರ ರು. ಸಿಗುತ್ತದೆ.

ಇದಲ್ಲದೇ ಹೀರೆಕಾಯಿ, ಪಡವಲಕಾಯಿ, ಟೊಮ್ಯಾಟೋ, ಕೀರೆ ಸೊಪ್ಪು, ಸಬ್ಬಸೀಗೆ ಸೊಪ್ಪು ಬೆಳೆಯುತ್ತಾರೆ. ತರಕಾರಿ, ಸೊಪ್ಪನ್ನು ಮೈಸೂರಿನ ಎಂ.ಜಿ. ರಸ್ತೆ ಮಾರುಕಟ್ಟೆ, ಬಂಡೀಪಾಳ್ಯದ ಎಪಿಎಂಸಿ ಮಾರಾಟ ಮಾಡುತ್ತಾರೆ. ವಾರ್ಷಿಕ 2-3 ಲಕ್ಷ ರು. ಆದಾಯವಿದೆ. ಇದಲ್ಲದೇ ತೆಂಗು- 80, ಬಾಳೆ- 20 ಗಿಡಗಳಿವೆ. ಸೀಬೆ, ಸಪೋಟ, ಹಲಸು ಮತ್ತಿತರ ಹಣ್ಣಿನ ಗಿಡಗಳಿವೆ. ಹೈನುಗಾರಿಕೆಯನ್ನು ಉಪ ಕಸುಬಾಗಿ ಕೈಗೊಂಡಿದ್ದು, ಎರಡು ಹಸುಗಳಿವೆ. ದಿನನಿತ್ಯಡೇರಿಗೆ 10 ಲೀಟರ್‌ ಹಾಲು ಪೂರೈಸುತ್ತಾರೆ. ಮಾಸಿಕ ಹತ್ತು ಸಾವಿರ ರು.ವರೆಗೆ ಆದಾಯವಿದೆ. ಇದಲ್ಲದೇ ಮೇಕೆ-10, ಕುರಿ- 2, ಇವೆ. ಗುತ್ತಿಗೆ ಪಡೆದಿರುವ 20 ಗುಂಟೆ ಜಮೀನಿನಲ್ಲಿ ನರೇಗಾ ಯೋಜನೆಯಲ್ಲಿ ಹಿಪ್ಪುನೇರಳೆ ನರ್ಸರಿ ಮಾಡುವ ಮೂಲಕವೂ ಆದಾಯ ವದ್ಧಿಸಿಕೊಂಡಿದ್ದಾರೆ.

ಒಟ್ಟಾರೆ ಎಲ್ಲಾ ಬೆಳೆಗಳಿಂದ ವಾರ್ಷಿಕ 10-12 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ರೇಷ್ಮೆ ಬೆಳೆಯ ಸಾಧನೆಗಾಗಿ ರಾಮು ಅವರನ್ನು 2023 ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ಅವರ ಪುತ್ರ ವಸಂತಕುಮಾರ್‌ ಬಿ.ಕಾಂ ಪದವೀಧರರಾಗಿದ್ದು, ಅವರ ಕೂಡ ಕೃಷಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. 2023 ರಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ಮೈಸೂರು ತಾಲೂಕು ಮಟ್ಟುದ ಪ್ರಗತಿಪರ ಯುವ ರೈತ ಪ್ರಶಸ್ತಿ ಗಳಿಸಿದ್ದಾರೆ. ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಮೈಸೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಪರ್ಕ ವಿಳಾಸ

ರಾಮು ಬಿನ್‌ ವರದೇಗೌಡ

ಲಕ್ಷ್ಮೀಪುರ

ವರುಣ ಹೋಬಳಿ

ಮೈಸೂರು ತಾಲೂಕು

ಮೈಸೂರು ಜಿಲ್ಲೆ

ಮೊ. 82968 54760

ಕೋಟ್‌

ಕೃಷಿಯನ್ನು ಇಷ್ಟಪಟ್ಟು ಮಾಡಬೇಕು. ಸರಿಯಾಗಿ ಮಾಡಿದರೆ ನಷ್ಟ ಎಂಬುದು ಇಲ್ಲವೇ ಇಲ್ಲ

- ವಸಂತಕುಮಾರ್‌, ಲಕ್ಷ್ಮೀಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ