ವಿದ್ಯಾರ್ಥಿಗಳಲ್ಲಿ ಕಲಿಯುವ ಹಂಬಲವಿದ್ದರೆ ಕಲ್ಲಿನ ಮೂರ್ತಿ ಕೂಡ ಕಲಿಸುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಕಲಿಕೆ ಮತ್ತು ಸಾಧನೆಯ ಗುರಿಯಲ್ಲಿ ಸ್ವಯಂಶಿಸ್ತು ಮತ್ತು ಸತತ ಅಭ್ಯಾಸ ಮಾಡುವ ಗುಣವನ್ನು ಕಾಪಾಡಿಕೊಳ್ಳಬೇಕು ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ. ಮಂಟೇಲಿಂಗು ತಿಳಿಸಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ನಾತಕ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಎರಡು ದಿನಗಳ ದಿಕ್ಷಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಲಿಯುವ ಹಂಬಲವಿದ್ದರೆ ಕಲ್ಲಿನ ಮೂರ್ತಿ ಕೂಡ ಕಲಿಸುತ್ತದೆ. ಕಲಿಕೆ ಎಂಬುದು ಜ್ಞಾನ ಸಂಪಾದನೆಯ ಮಾರ್ಗವಾಗಿದೆ. ಶಿಸ್ತು ಮತ್ತು ಸತತ ಅಭ್ಯಾಸವಿಲ್ಲದೆ ಸಾಧನೆಯ ದಾರಿ ಅಪೂರ್ಣಗೊಂಡ ಉದಾಹರಣೆಗಳು ಇತಿಹಾಸದಲ್ಲಿ ಸಾಕಷ್ಟಿವೆ ಎಂದು ಹೇಳಿದರು.ವಿದ್ಯಾರ್ಥಿಗಳ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿಯೇ ಇದೆ. ನಿಮ್ಮ ವ್ಯಕ್ತಿತ್ವವನ್ನು ಉದ್ಧಾರಗೊಳಿಸುವ ಶಕ್ತಿಗಳ ಕಡೆ ನಿಮ್ಮ ಆಲೋಚನೆ ಇರಬೇಕು. ದುರ್ಬಲಗೊಳಿಸುವುದರ ಬಗ್ಗೆ ಸದಾ ಎಚ್ಚರವಿರಬೇಕು. ಮಾನವನಿಗೆ ಹಲವು ಬಗೆಯ ಸಾಮರ್ಥ್ಯಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.ಆದರ್ಶವಿರುವ ವ್ಯಕ್ತಿ ನೂರು ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದವ ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದರ್ಶ ಬದುಕಿಗೆ ಭೂಷಣವಾಗಿರಬೇಕು. ನಮ್ಮ ವ್ಯಕ್ತಿತ್ವವನ್ನು ದುರ್ಬಲಗೊಳಿಸುವ ವಿಷಯಗಳನ್ನು ವಿಷದಂತೆ ತ್ಯಜಿಸಿ, ಸಬಲಗೊಳಿಸುವುದನ್ನು ಅಮೃತದಂತೆ ಬಲಗೊಳಿಸಿ ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜೀಕರಣ, ಸಹವರ್ತಿಸುವುದು, ಆಡಳಿತ, ಅನುಭವ ಇವುಗಳನ್ನು ಪಡೆಯುವಲ್ಲಿ ಈ ದಿಕ್ಷಾರಂಭ ಕಾರ್ಯಕ್ರಮ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ನಡೆಯೊಂದಿಗೆ ಅಧ್ಯಯನದಲ್ಲಿ ಸದಾ ನಿರತರಾಗಬೇಕು. ಶಿಸ್ತು ಮತ್ತು ಬದ್ದತೆಯನ್ನು ಅಳವಡಿಸಿಕೊಳ್ಳಬೇಕು. ಈ ದೇಶದ, ಸಮಾಜದ ನಿಷ್ಟಾವಂತ ನಾಗರೀಕರಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದರು. ವಿದ್ಯಾರ್ಥಿನಿ ಅಧಿತಿ ಹೆಗಡೆ ಮತ್ತು ಕ್ಷೀರಾ ಶಾನ್ ಭೋಗ್ ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಪೂಜಾ ನಿರೂಪಿಸಿದರು. ಡಾ.ಎಲ್. ವಿನಯ್ ಕುಮಾರ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.