ಕನ್ನಡಪ್ರಭ ವಾರ್ತೆ ಮಂಡ್ಯ
ತನಿಖಾ ಸಮಿತಿಯು ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ನಿಯಮಗಳ ಉಲ್ಲಂಘನೆ, ಸ್ವಜನಪಕ್ಷಪಾತ, ಹಣ ದುರ್ಬಳಕೆ ಆಗಿರುವ ಅಂಶಗಳನ್ನು ಬಹಿರಂಗಗೊಳಿಸಿದೆ. ಮುಖ್ಯವಾಗಿ ಕಾರ್ಖಾನೆಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಕೆಪಿಟಿಟಿ ನಿಯಮದಂತೆ ಇ-ಪೊಕ್ಯೂರ್ಮೆಂಟ್ ಮೂಲಕ ಏಜೆನ್ಸಿಗಳನ್ನು ಆಹ್ವಾನಿಸಿಲ್ಲ. ಬದಲಿಗೆ ನೇರ ಗುತ್ತಿಗೆ ನೀಡಲಾಗಿದೆ. ಸ್ವಿಸ್ ಎಂಬ ಹೊರಗುತ್ತಿಗೆ ಏಜೆನ್ಸಿಗೆ ಒಪ್ಪಿಕೊಂಡ ಶೇ.೧ರ ಸೇವಾಶುಲ್ಕದ ಬದಲು ಶೇ.೩ರಷ್ಟು ಸೇವಾಶುಲ್ಕ ಪಾವತಿಸಿ ಕಂಪನಿಗೆ ₹೩,೮೧,೫೫೭ ಗಳನ್ನು ನಷ್ಟ ಉಂಟುಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಕ್ಕರೆ ಮಾರಾಟದಲ್ಲೂ ಟೆಂಡರ್ದಾರರಿಂದ ಇಎಂಡಿ ಪಡೆಯದೆ ಅವಕಾಶ ನೀಡಿದ್ದರಿಂದ ಸಕಾಲಕ್ಕೆ ಸಕ್ಕರೆ ಎತ್ತುವಳಿ ಮಾಡದೆ ಕಂಪನಿಗೆ ₹೧೯,೮೯ ಲಕ್ಷ ನಷ್ಟ ಉಂಟುಮಾಡಲಾಗಿದೆ. ನಿಯಮಬಾಹಿರವಾಗಿ ನಿವೃತ್ತ ನೌಕರರ ನೇಮಕ, ಅನಗತ್ಯ ನೇಮಕಾತಿಗಳನ್ನು ಮಾಡಿಕೊಂಡಿರುವುದನ್ನು ವರದಿ ದೃಢೀಕರಿಸಿದೆ ಎಂದು ಹೇಳಿದರು.ಮೈಷುಗರ್ ಆವರಣದಲ್ಲಿ ಸೀಸಿ ಟೀವಿ ಅಳವಡಿಕೆಯನ್ನು ಆರ್ಬಿ ಟೆಕ್ ಏಜೆನ್ಸಿಯೇ ಮಾಡಿಕೊಂಡಿದೆ ಎಂದು ಆರಂಭದಲ್ಲಿ ಅಧ್ಯಕ್ಷರು ರೈತರನ್ನು ದಿಕ್ಕು ತಪ್ಪಿಸಿದ್ದರು. ಆದರೆ, ತನಿಖಾ ವರದಿಯ ಪ್ರಕಾರ ಆರ್ಬಿ ಟೆಕ್ ಏಜೆನ್ಸಿ ಸಿಸಿ ಟೀವಿ ಬಾಬ್ತು ಹಣವನ್ನು ಐಟಿ ವರ್ಲ್ಡ್ ಕಂಪನಿಗೆ ಪಾವತಿಸುವಂತೆ ಕೋರಿದ್ದು, ಅದರಂತೆ ಸೀಸಿ ಟೀವಿ ಅಳವಡಿಕೆಗಾಗಿ ಐಟಿ ವರ್ಲ್ಡ್ ಕಂಪನಿಗೆ ಮೈಷುಗರ್ನಿಂದ ₹೧೦.೪೯ ಲಕ್ಷ ಗಳನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಮೈಷುಗರ್ ಕಾರ್ಖಾನೆಯನ್ನು ತಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಂಡಿರುವ ಅಧ್ಯಕ್ಷ ಸಿ.ಡಿ.ಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರನ್ನು ಪದಚ್ಯುತಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.