ನರಗುಂದ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಭೆಯು ಸರ್ಕಾರಿ ಪ್ರಾಯೋಜಿತ ಗಲಭೆಯಾಗಿದೆ. ಪರವಾನಗಿ ಪಡೆದು ಗಣೇಶ ಪ್ರತಿಷ್ಠಾಪನೆ ಮಾಡಿದ ಪ್ರಮುಖ ವ್ಯಕ್ತಿಯನ್ನು ಎ1 ಆರೋಪಿಯನ್ನಾಗಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ, ಸಿರಿಯಾ ವ್ಯವಸ್ಥೆ ಇದೆಯೋ ತಿಳಿಯದಾಗಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಸಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬ ಹಿಂದುಗಳಿಗೆ ಪವಿತ್ರವಾಗಿದೆ. ಗಣೇಶನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವ ಭಾರತದಲ್ಲಿ ಹಬ್ಬವನ್ನು ಭಯದಿಂದ ಆಚರಿಸುವಂತಹ ಸನ್ನಿವೇಶಗಳು ಕಂಡು ಬರುತ್ತಿವೆ. ಮುಸ್ಲಿಮರು ಲಾಂಗು, ಮಚ್ಚು, ಪೆಟ್ರೋಲ್ ಬಾಂಬ್ ಹಿಡಿದು ದಾಂಧಲೆ ಮಾಡಿದ್ದಾರೆ. ಹಿಂದುಗಳ ಆಸ್ತಿಪಾಸ್ತಿ ಸುಟ್ಟು ಹಾಕಿದ್ದಾರೆ. ಇಷ್ಟೆಲ್ಲ ನಡೆದರೂ ಗೃಹ ಸಚಿವ ಜಿ. ಪರಮೇಶ್ವರ ಇದೊಂದು ಸಣ್ಣ ಘಟನೆ ಎಂದಿದ್ದು ಅವರ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.ಹಿಂದುಗಳು ದೇಶದಲ್ಲಿ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿಲ್ಲ. ಹಬ್ಬಗಳಲ್ಲಿ ಆಗುತ್ತಿರುವ ಘಟನೆಗಳು ಮತ್ತೆ ಮತ್ತೆ ನಡೆದರೂ ಆಶ್ಚರ್ಯವಿಲ್ಲ. ರಾಜ್ಯ ಸರ್ಕಾರದ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ. ಚನ್ನಪಟ್ಟಣ ಉಪಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವು ಗಲಭೆಗೆ ಪ್ರಚೋದನೆ ನೀಡಿದೆ. ಬಂಧನವಾಗಿರುವ ಹಿಂದುಗಳ ಬಿಡುಗಡೆ ಕೂಡಲೇ ಆಗಬೇಕು. 136 ಕಾಂಗ್ರೆಸ್ ಶಾಸಕರು ಕೇವಲ ಮುಸ್ಲಿಂ ಮತಗಳಿಂದ ಚುನಾಯಿತರಾಗಿಲ್ಲ. ಹಿಂದುಗಳ ಬಿಡುಗಡೆಗೆ ಕಾಂಗ್ರೆಸ್ ಶಾಸಕರು ಯಾರೂ ಧ್ವನಿ ಎತ್ತುತ್ತಿಲ್ಲ. ಘಟನೆಗೆ ಸಂಬಂಧಿಸಿದಂತೆ ಉನ್ನತ ಪೊಲೀಸ್ ಅಧಿಕಾರಿಗಳ ತಲೆದಂಡ ಆಗಲೇಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಎಸ್.ಆರ್.ಹಿರೇಮಠ, ಅಜ್ಜಪ್ಪ ಹುಡೇದ, ಎಸ್.ಆರ್.ಪಾಟೀಲ, ಶಿವಾನಂದ ಮುತ್ತವಾಡ, ಮುತ್ತಣ್ಣ, ಪ್ರಶಾಂತ ಜೋಶಿ, ದೇವೇಂದ್ರ ಕಲಾಲ, ಬಸು ಪಾಟೀಲ, ಹಸನ ನವಲೆ ಹಾಗೂ ಪುರಸಭೆ ಬಿಜೆಪಿ ಸದಸ್ಯರು ಇದ್ದರು.