ಕನ್ನಡಪ್ರಭ ವಾರ್ತೆ ಮಂಡ್ಯ
ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೇ ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದ ವರದಿ ಸಿದ್ದಪಡಿಸಲು ಮೇ 5 ರಿಂದ ಜು.6ರವರೆಗೆ ನಡೆದ ಸಮೀಕ್ಷೆಯಲ್ಲಿ 27.24 ಲಕ್ಷ ಕುಟುಂಬಗಳ 1.ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು, ಪ್ರಸ್ತುತ 5 ಗುಂಪುಗಳಾಗಿ ವಿಂಗಡಿಸಿ ಅತಿ ಹಿಂದುಳಿದ ಗುಂಪಿಗೆ ಶೇ.1, ಎಡಗೈ ಗುಂಪಿಗೆ ಶೇ.6, ಬಲಗೈ ಗುಂಪಿಗೆ ಶೇ.5, ಬಂಜಾರ, ಭೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇ.4ರಷ್ಟು ಜಾತಿಯೇ ಅಲ್ಲದೇ ಗುಂಪುಗಳಿಗೆ ಶೇ.1ರಷ್ಟು ಮೀಸಲು ನಿಗದಿಪಡಿಸಿರುವುದು ಸರಿಯಷ್ಟೇ. ಏಕಪಕ್ಷೀಯವಾಗಿ ಒಂದು ಸಮುದಾಯವನ್ನು ಓಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿರುವ ನಾಗಮೋಹನ್ದಾಸ್ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.ವರದಿಯ ಪ್ರಕಾರ ಮಾದಿಗರು 27,73,780, ಹೊಲಯ 27,72,103, ಛಲವಾದಿ 3,76,448, ಆದಿ ಕರ್ನಾಟಕ 1,47,199, ಪರೈಯನ್ ಹಾಗೂ ಪರಯ 1,61,164, ಆದಿ ದ್ರಾವಿಡ 3,20,641೧ ಆಗಿದ್ದು, ಆದರೆಹೊಲಯ ಸಮುದಾಯಕ್ಕೆ ಛಲವಾದಿ, ಆದಿ ಕರ್ನಾಟಕ, ಪರೈಯನ್ ಹಾಗೂ ಪರಯ, ಆದಿ ದ್ರಾವಿಡರು ಇವರೆಲ್ಲರೂ ಮೂಲ ಹೊಲಯ ಜಾತಿಗೆ ಸೇರಿದವರಾಗಿರುತ್ತಾರೆ.
ಆದ ಕಾರಣ ನಾಗಮೋಹನ್ದಾಸ್ರವರು ಸಲ್ಲಿಸಿರುವ ಏಕಪಕ್ಷೀಯ, ಪಕ್ಷಪಾತದಿಂದ ಕೂಡಿರುವ ವರದಿಯನ್ನು ಯಥಾತ್ತಾಗಿ ಒಪ್ಪಿಕೊಳ್ಳದೆ ಸಚಿವ ಸಂಪುಟದ ಉಪಸಮಿತಿ ರಚಿಸಿ ಮಾನವ ಶಾಸ್ತ್ರಜ್ಞರನ್ನು ನೇಮಿಸಿ ಕೂಲಂಕಷ ಪರಿಶೀಲಿಸಿ ನಂತರ ಮೀಸಲಾತಿ ವರ್ಗೀಕರಣ ಮಾಡುವಂತೆ ಮುಖಂಡರಾದ ಎಚ್.ಕೆ.ಲವ, ಜೆ.ಪ್ರಸನ್ನ, ಸಿವೈ.ನಿತ್ಯಾನಂದ ಅವರೂ ಆಗ್ರಹಿಸಿದ್ದಾರೆ.