ಕನ್ನಡಪ್ರಭ ವಾರ್ತೆ ವಡಗೇರಾ
ನಿಜಶರಣ ಅಂಬಿಗರ ಚೌಡಯ್ಯನವರ ಹೆಸರನ್ನು ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಹೆಸರಿಡುವಂತೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರಿಗೆ ಒತ್ತಾಯಿಸಿದ ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ,ತಾಲೂಕಿನ ಟಿ- ವಡಗೇರಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ನಿಮಿತ್ತ ಪೂಜಾ ಅಭಿಯಾನದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದ ಸುಧಾರಣೆಗೆ ಶ್ರಮಿಸಿದ ಬಸವಾದಿ ಶರಣರ ಸಾಲಿನಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ ನಿಜಶರಣ ಅಂಬಿಗರ ಚೌಡಯ್ಯನವರು ಪ್ರಮುಖರಾಗಿದ್ದಾರೆ. ಹರಿಗೋಲಿನಲ್ಲಿ ಹೊಳೆಯನ್ನು ದಾಟಿಸುವ ಕಾಯಕ ಮಾಡಿಕೊಂಡು ಜನರಿಗೆ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗಲು ಅನುವು ಮಾಡಿಕೊಡುತ್ತಿದ್ದರು. ಜೊತೆಗೆ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಮಹತ್ವದ ಕೊಡುಗೆ ನೀಡಿದ್ದಾರೆ. ಕಬ್ಬಲಿಗ ಸಮಾಜದಿಂದ ಬಂದು ಮಹಾನ್ ಜನಗಳನ್ನು ರಚಿಸುವ ಮೂಲಕ ಕನ್ನಡ ನಾಡಿಗೆ ಹಾಗೂ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿರುವರು. ಇಂತಹ ಮಹತ್ವದ ಸಾಧನೆ ಮಾಡಿದ ಚೌಡಯ್ಯನವರ ಹೆಸರು ಕರ್ನಾಟಕದಲ್ಲಿ ಸಂಚರಿಸುವ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಹೆಸರಿಡಬೇಕು ಎಂದು ಒತ್ತಾಯಿಸಿದರು.ಕೋಲಿ ಕಬ್ಬಲಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ರಾಜ್ಯ ಸರ್ಕಾರ ಆಚರಿಸುವ ನಿರ್ಧಾರ ಕೈಗೊಂಡಿರುತ್ತದೆ. ಇದಲ್ಲದೆ, ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದು ಹೇಳಿದರು.
ವೆಂಕಟೇಶ ಹಾಲಗೇರಿ, ನಿಜಲಿಂಗಪ್ಪ ಮಾತಾ, ವೆಂಕಟೇಶ ಕಕ್ಕಸಗೇರಾ, ದೇವಿಂದಪ್ಪ ಗೂಡುರು, ಹೊನ್ನಯ್ಯ ಮ್ಯಾಗೇರಿ, ಮರೆಪ್ಪ ಸಾಧು, ದೇವಿಂದ್ರಪ್ಪ ಗಗ್ರಿ, ಮರೆಪ್ಪ ಗಗ್ರಿ, ಶಾಂತಗೌಡ, ದೇವು ಕಲಾಲ, ರಾಜು ಗಗ್ರಿ, ದೇವು ಕೊಮರನೋರ್, ತಿಪ್ಪಣ್ಣ ಸೇರಿದಂತೆ ಇನ್ನಿತರರಿದ್ದರು.