- ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿಕೆ । ಹೊನ್ನಾಳಿ ತಾಲೂಕಿನಲ್ಲಿ ಮತಯಾಚನೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೊಡುತ್ತದೆಂದರೆ ಅದು ಅವರ ಪ್ರಾಮಾಣಿಕತೆ, ದೇಶಪ್ರೇಮ ಹಾಗೂ ಜನರ ಸುರಕ್ಷತೆ ಬಗ್ಗೆ ಇರುವ ಕಾಳಜಿ ಎಂದು ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.ಸೋಮವಾರ ತಾಲೂಕಿನ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಕತ್ತಿಗೆ, ದೊಡ್ಡೇರಳ್ಳಿ, ಚಿಕ್ಕೇರಹಳ್ಳಿ, ಮಾರಿಕೊಪ್ಪ, ಮುಂತಾದ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ, ಚುನಾವಣೆ ಮುಗಿದರೆ ಅವರು ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ. ಆದ್ದರಿಂದ ಆಮಿಷಗಳಿಗೆ ಒಳಗಾಗದೇ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಮತ್ತಷ್ಟು ಉತ್ತುಂಗಕ್ಕೆ ಹೋಗಲಿದೆ, ನೀವು ಕೊಡುವ ಒಂದೊಂದು ಮತವೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕಾರಿ ಆಗುತ್ತದೆ. ದೇಶ ನಿಶ್ಚಿತವಾಗಿ ಜಗತ್ತಿನಲ್ಲಿ ಶಕ್ತಿಶಾಲಿ ದೇಶವಾಗಿ ಅಭಿವೃದ್ಧಿಯಾಗುತ್ತದೆ ಎಂದರು.ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನರೇಂದ್ರ ಮೋದಿ ಮೂರನೇ ಬಾರಿಗೆ ಮತ್ತೆ ಪ್ರಧಾನಿ ಆಗುವುದು ನಿಶ್ಚಿತ. ಇಡೀ ದೇಶ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ನೋಡಲಿಕ್ಕೆ ಮತ್ತೆ ಕಾತುರವಾಗಿದೆ. ಅವರು ಪ್ರಧಾನಿ ಆಗಲಿಕ್ಕೆ ಒಂದು ಸಂಖ್ಯೆ ದಾವಣಗೆರೆಯೂ ಕಾರಣ ಆಗಬೇಕು. ಹಾಗಾಗಿ, ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಕಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಅವಳಿ ತಾಲೂಕಿನಾಧ್ಯಂತ ಸಾವಿರಾರು ಕೋಟಿ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಸಂಸದರಾದ ಜಿ.ಎಂ. ಸಿದ್ದೇಶಣ್ಣ ಕೂಡ ಇಡೀ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿಜಯಿ ಆಗುವುದು ನಿಶ್ಚಿತ ಎಂದರು.ಮಾಜಿ ಸಚಿವ ಮುರುಗೇಶ್ ನಿರಾಣಿ ಸೊಸೆ ಡಾ.ದಾಕ್ಷಾಯಣಮ್ಮ ಮಾತನಾಡಿ, ಗಾಯತ್ರಿ ಸಿದ್ದೇಶ್ವರ್ ಮೊದಲಿನಿಂದಲ್ಲೂ ಅವರಿಗೆ ರಾಜಕೀಯ ಅನುಭವ ಇದೆ. ಅವರು ರೈತ ಮಹಿಳೆಯೂ ಕೂಡ ಹೌದು. ಆದ್ದರಿಂದ ಅವರನ್ನು ಮತ ನೀಡಿ ಆಯ್ಕೆ ಮಾಡಬೇಕು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ತರಗನಹಳ್ಳಿ ರಮೇಶ್ ಗೌಡ, ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ಎ.ಬಿ.ಹನುಮಂತಪ್ಪ, ಶಿವಾನಂದ್, ಕೆ.ವಿ.ಚನ್ನಪ್ಪ, ಎಂ.ಆರ್. ಮಹೇಶ್, ನಾಗರಾಜ್, ಮಾದೇನಹಳ್ಳಿ, ಕೋನಾಯಕನಹಳ್ಳಿ ಮಂಜುನಾಥ್ ಹಾಗೂ ಇತರರು ಇದ್ದರು.- - - -29ಎಚ್.ಎಲ್.ಐ2:
ಹೊನ್ನಾಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ಸರ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮತಯಾಚಿಸಿದರು. ಬಿಜೆಪಿ ಅನೇಕ ಮುಖಂಡರು ಇದ್ದರು.