ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋವಿವಿ ನಿರ್ದೇಶನಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.27ರಂದು ಮೆಣಸಿನಕಾಯಿ ಬೆಳೆಯ ರಾಷ್ಟ್ರೀಯ ಸಮ್ಮೇಳನಕ್ಕೆ ಕರ್ನಾಟಕ ಕೃಷಿ ಬೆಲೆ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಅಶೋಕ ದಳವಾಯಿ ಚಾಲನೆ ನೀಡಲಿದ್ದಾರೆ. ನವದೆಹಲಿಯ ಐಸಿಎಸ್ಆರ್ನ ಮಾಜಿ ಡಿಡಿಜಿ ಡಾ.ಎನ್.ಕೆ. ಕೃಷ್ಣಕುಮಾರ, ಔರಂಗಾಬಾದನ ಎಟಿಪಿಬಿಆರ್ ನಿರ್ದೇಶಕ ಡಾ.ಸುರಿಂದರ್ ಆಗಮಿಸಲಿದ್ದಾರೆ. ತೋವಿವಿಯ ಕುಲಪತಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಸ್ಮರಣ ಸಂಚಿಕೆ ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಮೆಣಸಿನಕಾಯಿ ಸಂಶೋಧನೆ, ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಚರ್ಚಿಸಲು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉತ್ಪಾದನಾ ಪ್ರವೃತ್ತಿಗಳು, ಹವಾಮಾನ ಬದಲಾವಣೆ ಪರಿಣಾಮಗಳು, ಮಾರುಕಟ್ಟೆ ಸ್ಥಿರತೆ ಮತ್ತು ಅಸ್ಥಿರತೆ ವಿಶ್ಲೇಷಣೆ ಹಾಗೂ ಉತ್ಪಾದನಾ ಸುಸ್ಥಿರತೆ ಕಾಯ್ದುಕೊಳ್ಳುವ ತಂತ್ರಜ್ಞಾನಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಉಪನ್ಯಾಸಗಳು, 38 ಆಹ್ವಾನಿತ ಭಾಷಣಗಳು ಮತ್ತು 17 ಕೈಗಾರಿಕಾ ಪ್ರಸ್ತುತಿಗಳು ಮಂಡನೆಯಾಗಲಿವೆ. ಪ್ರಮುಖ ಭಾಷಣಕಾರರಾಗಿ ಇಂಟರ್ನ್ಯಾಷನಲ್ ಸೀಡ್ ಫೆಡರೇಶನ್ ಹಾಗೂ ಐಎಎಚ್ಎಸ್ ವ್ಯವಸ್ಥಾಪಕ ನಿರ್ದೇಶಕರು ಆರ್ಥರ್ ಸಂತೋಷ ಅತ್ತಾವರ್, ಧಾರವಾಡದ ಸರ್ಪನ್ ಹೈಬ್ರಿಡ್ ಸೀಡ್ಸ್ ಪ್ರೈ.ಲಿಮಿಟೆಡನ ಸಂಸ್ಥಾಪಕ ಡಾ.ನಿಜಗುಣದೇವ ಗದ್ದಗಿಮಠ ಮತ್ತು ನಿವೃತ್ತ ತರಕಾರಿ ತಳಿ ಅಭಿವೃದ್ದಿ ತಜ್ಞ ಡಾ.ಎ.ಎ.ದೇಶಪಾಂಡೆ ಭಾಗವಹಿಸಲಿದ್ದಾರೆ. ತೈವಾನ್, ಜಪಾನ್ ಮತ್ತು ತೋವಿವಿ ಬಾಗಲಕೋಟೆಯ ಖ್ಯಾತ ವಿಜ್ಞಾನಿಗಳು ತಮ್ಮ ಅನುಭವಗಳನ್ನು ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದರು.
ತೋವಿವಿಯು 15 ವರ್ಷಗಳಿಂದ ಮೆಣಸಿನಕಾಯಿ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಜಿಲ್ಲೆಯಲ್ಲಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಒಟ್ಟು 181 ಸಂಕ್ಷಿಪ್ತ ಪ್ರಬಂಧಗಳು ಸ್ವೀಕರಿಸಲ್ಪಟ್ಟಿದ್ದು, 10 ವಿಜ್ಞಾನಿಗಳು, 32 ಖಾಸಗಿ ಪ್ರತಿನಿಧಿಗಳು, 26 ರೈತರು ಮತ್ತು ಉದ್ಯಮಿಗಳು, 85 ಸಂಶೋಧನಾ ವಿದ್ಯಾರ್ಥಿಗಳು ಮತ್ತು 30 ಪ್ರದರ್ಶಕರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.