ಗದಗ:ನಗರದ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನ. 22 ಶುಕ್ರವಾರದಂದು ಮನಸ್ವಿನಿ ರಾಷ್ಟ್ರಮಟ್ಟದ ನರ-ಮನೋರೋಗ ಆಯುರ್ವೇದ ಸಮ್ಮೇಳನ ಜರುಗಲಿದೆ ಎಂದು ಡಿಜಿಎಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ ಹೇಳಿದರು.
ಒತ್ತಡದ ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಮನಸ್ಸು ಹಾಗೂ ನರವ್ಯೂಹಕ್ಕೆ ಸಂಬಂದಿಸಿದ ಕಾಯಿಲೆಗಳಾದಂತಹ ಉದ್ವೇಗ ಖಿನ್ನತೆ, ಮೆದುಳು ಆಘಾತ (stroke) ಬೆನ್ನುಉರಿ ಹಾಗೂ ಆತ್ಮಹತ್ಯಾಯಂತಹ ಭಯಾನಕ ಸಂದರ್ಭಗಳು ಮನುಕುಲವನ್ನು ಕಾಡುತ್ತಿವೆ. ಈ ಸಮ್ಮೇಳನದಲ್ಲಿ ನುರಿತ ಚಿಕಿತ್ಸಕರು ಪ್ರಾಧ್ಯಾಪಕರು ಮನಸ್ಸು ಹಾಗು ನರವ್ಯೂಹಗಳಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಮೇಲೆ ಉಪನ್ಯಾಸ,ಪ್ರಬಂಧ ಮಂಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜ್ಞಾನದ ಹರಿವನ್ನು ಹಂಚಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ತಜ್ಞ ವೈದ್ಯ ಕೇರಳದ ಕೊಟ್ಟಕಲ್ ಆರ್ಯ ವೈದ್ಯಶಾಲದ ಡಾ. ಪಾರ್ವತಿ ದೇವಿ ಎಂ.ಪಿ. ಹಾಸನದ ಡಾ. ನಾರಾಯಣ ಪ್ರಕಾಶ ಹಾಗೂ ಜಿಐಎಂಎಸ್ ನ ಸಹಪ್ರಾದ್ಯಾಪಕ, ಖ್ಯಾತ ವೈದ್ಯ ಡಾ. ಜಿತೇಂದ್ರ ಮುಗಳಿ ಉಪನ್ಯಾಸ ನೀಡುವರು.ವಿವಿಧ ರಾಜ್ಯಗಳಿಂದ 30 ಕ್ಕೂ ಅಧಿಕ ಆಯುರ್ವೇದ ಮಹಾವಿದ್ಯಾಲಯಗಳು, ಸಂಘ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಮ್ಮೇಳನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ 50 ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧ ಮಂಡಿಸಲಿದ್ದಾರೆ.ಜತೆಗೆ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಕಳೆದ 4 ದಶಕಗಳಿಂದ ವೈದ್ಯಕೀಯ ಶಿಕ್ಷಣ ಹಾಗೂ ಸೇವೆಗಳನ್ನು ಮಾಡುತ್ತಾ ಜನಮಾನಸದಲ್ಲಿ ಮನೆಮಾತಾಗಿದ್ದು, ಅಂತಾರಾಷ್ಟ್ರೀಯ, ರಾಷ್ಟ್ರೀಯ, ಸಮ್ಮೇಳನ,ಗೋಷ್ಠಿ, ಕಾರ್ಯಗಾರಗಳನ್ನು ನಿರಂತರವಾಗಿ ಆಯೋಜಿಸುತ್ತಾ ವೈದ್ಯಕೀಯ ಶಿಕ್ಷಣದಲ್ಲಿ ತನ್ನದೇ ಆದ ಹೆಗ್ಗುರತನ್ನು ಸ್ಥಾಪಿಸಿದೆ ಎಂದು ಕಾಲೇಜು ಪ್ರಾಚಾರ್ಯ ಡಾ.ಸಂತೋಷ ಬೆಳವಡಿ ಹೇಳಿದರು.