ಮಡಿಕೇರಿ : ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ದೈನಂದಿನ ಜೀವನ ಸಹಾಯಕ ಸಾಧನ ಸಲಕರಣೆಗಳನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೋಮವಾರ ವಿತರಿಸಿದರು.ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸಲಕರಣೆ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಹಿರಿಯ ನಾಗರಿಕರು ಸ್ವಾಭಿಮಾನದಿಂದ ಜೀವನ ನಡೆಸುವಂತಾಗಲು ಎಲ್ಲರೂ ಗಮನಹರಿಸಬೇಕು ಎಂದು ಕರೆ ನೀಡಿದರು.
ಹಿರಿಯ ನಾಗರಿಕರ ಸಬಲೀಕರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಆ ನಿಟ್ಟಿನಲ್ಲಿ ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನ ಮತ್ತು ಪ್ರೇರೇಪಣೆಯಿಂದ ಮುನ್ನಡೆಯಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡುವಲ್ಲಿ ಪ್ರಥಮ ಆದ್ಯತೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರು ಗೌರವಯುತವಾಗಿ ಉತ್ತಮ ಬದುಕು ನಡೆಸಬೇಕು. ಆ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸಾಧ್ಯವಾದಷ್ಟು ಅಗತ್ಯ ಸಹಕಾರ ಕಲ್ಪಿಸಬೇಕು ಎಂದು ಹೇಳಿದರು.
ಹಿರಿಯ ನಾಗರಿಕರು ಮತ್ತು ವಿಕಲಚೇತನರ ಇಲಾಖೆಯ ಅಧಿಕಾರಿ ವಿಮಲಾ ಮಾತನಾಡಿ, ಹಿರಿಯ ನಾಗರಿಕರಿಗೆ 26 ವಾಕಿಂಗ್ ಸ್ಟಿಕ್, 30 ಕಿವಿ ಸಾಧನ, 14 ಕಾಲಿಗೆ ಬಳಸುವ ಸಾಧನ, 5 ಸಿಲಿಕಾನ್ ಹೋಂ, 4 ವೀಲ್ ಚೇರ್, 5 ಕಮಾಡೋ ವೀಲ್, 7 ಜನರಿಗೆ ವಾಕರ್ ಕಲ್ಪಿಸಲಾಯಿತು. ಒಟ್ಟಾರೆ 11 ಲಕ್ಷ ರು. ವೆಚ್ಚದ ಸಾಧನ ಸಲಕರಣೆಗಳನ್ನು ಹಿರಿಯ ನಾಗರಿಕರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು, ಅಲಿಮ್ಕೊ ಸಂಸ್ಥೆಯ ಶಿಲ್ಪ, ಸ್ವಾಮಿ ವಿವೇಕಾನಂದ ಯೂತ್ ಮೂವೆಮೆಂಟ್ನ ಕಾರ್ಯಕ್ರಮ ವಿಶೇಷ ಅಧಿಕಾರಿ ಬೋರಪ್ಪ, ಅಂಕಾಚಾರಿ ಇತರರು ಇದ್ದರು.