ಲಿಂಗದಹಳ್ಳಿ ಶಾಲೆಗೆ ಅಗತ್ಯ ಸೌಲಭ್ಯ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork | Published : Jun 21, 2025 12:49 AM

ಲಿಂಗದಹಳ್ಳಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ ಹೆಚ್ಚುವರಿ ಶಿಕ್ಷಕರು ಸೇರಿ ಅಗತ್ಯ ಸೌಲಭ್ಯಗಳು ದೊರೆಯಲಿವೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪ್ರೌಢಶಾಲೆಯ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ತರೀಕೆರೆ

ಲಿಂಗದಹಳ್ಳಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ ಹೆಚ್ಚುವರಿ ಶಿಕ್ಷಕರು ಸೇರಿ ಅಗತ್ಯ ಸೌಲಭ್ಯಗಳು ದೊರೆಯಲಿವೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಸಮೀಪದ ಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಗುಳ್ಳದ ಮನೆ ಗೋಪಾಲ ಕೃಷ್ಣ ಅವರು ಶಿಕ್ಷಣ ಪ್ರೇಮಿಯಾಗಿ ಪ್ರತಿ ವರ್ಷವು ಸಾವಿರಾರು ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಒದಗಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ, ತಾವು ಶಾಸಕರಾದ ನಂತರ ತರೀಕೆರೆ, ಬಾವಿಕೆರೆ, ಲಿಂಗದಹಳ್ಳಿ ಈ ಮೂರು ಪ್ರೌಢಶಾಲೆಗಳನ್ನು ಆಯ್ಕೆ ಮಾಡಿದ್ದು, ಇದರಿಂದ ಬರುವ ಅನುದಾನದಲ್ಲಿ ಲಿಂಗದಹಳ್ಳಿ ಪ್ರೌಢಶಾಲೆಗೆ ಹೆಚ್ಚುವರಿ ಕೊಠಡಿ ಹೆಚ್ಚುವರಿ ಶಿಕ್ಷಕರು ಸೇರಿದಂತೆ ಅನೇಕ ಸೌಲಭ್ಯಗಳು ಸಿಗಲಿವೆ ಎಂದು ಹೇಳಿದರು.

ಸಮಾಜ ಸೇವಕ ಗುಳ್ಳದ ಮನೆ ಗೋಪಾಲ ಕೃಷ್ಣ ಮಾತನಾಡಿ, ಲಿಂಗದಹಳ್ಳಿ ಹೋಬಳಿಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು ಈ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೋಬಳಿಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇಕಡ 80ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡು ಹೋಬಳಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ ಮೂಲಕ ಶಾಲು ಹೊದಿಸಿ ಪುಷ್ವ ಮಾಲೆಯೊಂದಿಗೆ ಸ್ಮರಣಿಕೆಗಳನ್ನು ನೀಡಿ ಪುರಸ್ಕಾರಿಸಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಜಿ.ಎಚ್.ಶ್ರೀನಿವಾಸ್ ಶಾಸಕರಾದ ನಂತರ ಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಅಗತ್ಯವಾಗಿದ್ದ ಒಂದು ಗಂಡು ಮತ್ತು ಹೆಣ್ಣುಮಕ್ಕಳ ಶೌಚಾಲಯ, ಹೆಚ್ಚುವರಿ ಕೊಠಡಿ ಮತ್ತು ಸಿಂಥೆಟಿಕ್, ಕ್ರೀಡಾಂಗಣ, ರಂಗಮಂದಿರ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಅಭಿವೃದ್ದಿ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.

ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಿವೃತ್ತ ಬಿಇಒ ರಾಜ್‌ಕುಮಾರ್, ತಾಪಂ ಕೆಡಿಪಿ ಸದಸ್ಯೆ ರಚನಾ ಶ್ರೀನಿವಾಸ್, ಪ್ರೌಢಶಾಲಾ ಶಿಕ್ಷಕ ಬಿ.ಸಿ. ಚಂದ್ರಶೇಖರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಯ್ಯ, ನಾಗೇಶಪ್ಪ ಮತ್ತಿತರರು ಇದ್ದರು.