-ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭರವಸೆ
ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪರಿಶಿಷ್ಟ ವರ್ಗದವರಿಗೆ ಸಿಗುವ 24 ಲಕ್ಷ ರು. ವನ್ನು ಸಂಜಯನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ನೀಡಲಾಗುವುದು. ಈ ಭವನದ ಸಮೀಪವೇ ವಾಲ್ಮೀಕಿ ಪುತ್ಥಳಿ ನಿರ್ಮಿಸಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸರ್ಕಾರ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವಾಲ್ಮೀಕಿ ಭವನಕ್ಕೆ ಅನುದಾನ ನೀಡುವ ಕುರಿತು ಮಾಜಿ ಸಚಿವ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರತಿವರ್ಷ ಶಾಸಕರಿಗೆ ಟಿಎಸ್ಟಿ ನಿಧಿಯಡಿ 12ಲಕ್ಷ ರು. ನೀಡಲಾಗುತ್ತಿದ್ದು, ಎರಡು ವರ್ಷಗಳ 24 ಲಕ್ಷ ರು. ಅನುದಾನವನ್ನು ವಾಲ್ಮೀಕಿ ಭವನಕ್ಕೆ ನೀಡಿ, ಸಾಮಾನ್ಯ ನಿಧಿಯಿಂದ ಪರಿಶಿಷ್ಟ ವರ್ಗದವರಿಗೆ ನೀಡಬೇಕಾದ ಸೌಲಭ್ಯ ನೀಡಲಾಗುವುದು. ತಾಲೂಕಿನ ಗುಂಡಂಗೆರೆಯಲ್ಲಿ ವಾಲ್ಮೀಕಿ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ನಗರದಲ್ಲಿಯೂ ಸಹ ವಾಲ್ಮೀಕಿ ಪುತ್ಥಳಿ ನಿರ್ಮಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಉಮಾಪತಿ, ಬ್ರಹ್ಮಾನಂದ ಸ್ವಾಮೀಜಿ, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷ ಕುಮಾರ್, ನಗರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಕೃಷ್ಣಪ್ಪ, ಮುಖಂಡರಾದ ಮುನಿಕೃಷ್ಣಪ್ಪ, ದೇವರಾಜಮ್ಮ ಸಂಜೀವ್ ನಾಯಕ್, ಓಬದೇನಹಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.